ADVERTISEMENT

ಕಾಶ್ಮೀರ | ಒಮರ್ ಅಬ್ದುಲ್ಲಾ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದ ‌AAP ಶಾಸಕ

ಪಿಟಿಐ
Published 15 ಜೂನ್ 2025, 4:28 IST
Last Updated 15 ಜೂನ್ 2025, 4:28 IST
<div class="paragraphs"><p>ಮೆಹ್ರಾಜ್ ಮಲಿಕ್</p></div>

ಮೆಹ್ರಾಜ್ ಮಲಿಕ್

   

–ಪಿಟಿಐ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡಿರುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ಏಕೈಕ ಶಾಸಕ ಮೆಹ್ರಾಜ್ ಮಲಿಕ್ ತಿಳಿಸಿದ್ದಾರೆ.

ADVERTISEMENT

ಮಲಿಕ್ ಅವರು ಬೆಂಬಲ ಹಿಂತೆಗೆದುಕೊಂಡಿರುವುದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಹೊಂದಿದೆ.

90 ಸ್ಥಾನಗಳ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಶಾಸಕರು ಮತ್ತು ಕಾಂಗ್ರೆಸ್ ಆರು ಶಾಸಕರನ್ನು ಹೊಂದಿದೆ. ಜತೆಗೆ ಒಮರ್ ಸರ್ಕಾರಕ್ಕೆ ಐದು ಪಕ್ಷೇತರ ಶಾಸಕರ ಬೆಂಬಲವೂ ಇದೆ.

‘ದೋಡಾದ ಎಎಪಿ ಶಾಸಕನಾದ ನಾನು, ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟಕ್ಕೆ ನೀಡಿದ್ದ ನನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ನನ್ನ ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಜನರ ನಂಬಿಕೆ ಮತ್ತು ಕಲ್ಯಾಣವು ಯಾವಾಗಲೂ ನನ್ನ ಪ್ರಮುಖ ಆದ್ಯತೆಯಾಗಿರುತ್ತದೆ’ ಎಂದು ಮೆಹ್ರಾಜ್ ಮಲಿಕ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷದ ನಡೆದ ವಿಧಾನಸಭೆ ಚುನಾವಣೆಯಲ್ಲಿ ದೋಡಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೆಹ್ರಾಜ್ ಮಲಿಕ್, ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು 4,538 ಮತಗಳಿಂದ ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದರು. ಜತೆಗೆ, ಜಮ್ಮು-ಕಾಶ್ಮೀರದಲ್ಲಿ ಗೆದ್ದಂತಹ ಎಎಪಿಯ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದೇ ವರ್ಷ ಮಾರ್ಚ್ 21ರಂದು ಮೆಹ್ರಾಜ್ ಮಲಿಕ್ ಅವರನ್ನು ಎಎಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.