ADVERTISEMENT

ಚಳಿಗಾಲ ಆರಂಭ: ಕೇದಾರನಾಥ, ಯಮುನೋತ್ರಿ ದೇಗುಲಗಳು ಬಂದ್‌

ಪಿಟಿಐ
Published 6 ನವೆಂಬರ್ 2021, 10:10 IST
Last Updated 6 ನವೆಂಬರ್ 2021, 10:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಡೆಹ್ರಾಡೂನ್: ಚಳಿಗಾಲ ಆರಂಭವಾದ ಹಿನ್ನೆಲೆಯಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳಗಳಾದ ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಶನಿವಾರ ಮುಚ್ಚಲಾಯಿತು.

ವೇದ ಮಂತ್ರ ಘೋಷಗಳೊಂದಿಗೆ ಕೇದಾರನಾಥ ದೇವಾಲಯದ ಪ್ರವೇಶ ದ್ವಾರಗಳನ್ನು ಬೆಳಿಗ್ಗೆ 8 ಗಂಟೆಗೆ ಮತ್ತು ಯಮುನೋತ್ರಿ ದೇಗುಲದ ಪ್ರವೇಶ ದ್ವಾರಗಳನ್ನು ಮಧ್ಯಾಹ್ನ 12.15 ಕ್ಕೆ ಮುಚ್ಚಲಾಯಿತು ಎಂದು ಚಾರ್‌ಧಾಮ್‌ ದೇವಸ್ಥಾನ ಮಂಡಳಿಯ ಮಾಧ್ಯಮ ವಿಭಾಗ ತಿಳಿಸಿದೆ.

ಈ ಸಂದರ್ಭದಲ್ಲಿ ಅಸಂಖ್ಯಾತ ಭಕ್ತರು ಎರಡೂ ದೇವಾಲಯಗಳಿಗೆ ಭೇಟಿ ನೀಡಿ, ಚಳಿಗಾಲದ ಅವಧಿಯಲ್ಲಿ ದೇವಾಲಯದ ಬಾಗಿಲು ಮುಚ್ಚುವ ಪ್ರಕ್ರಿಯೆಗೆ ಸಾಕ್ಷಿಯಾದರು.

ADVERTISEMENT

ದೇವಾಲಯಗಳ ದ್ವಾರಗಳನ್ನು ಮುಚ್ಚಿದ ನಂತರ, ಬಾಬಾ ಕೇದಾರನಾಥ (ಶಿವ) ಮತ್ತು ಯಮುನಾ ದೇವತೆಯ ವಿಗ್ರಹಗಳನ್ನು ಪುಷ್ಪಾಲಂಕೃತ ಪಲ್ಲಕ್ಕಿಗಳಲ್ಲಿ ಉತ್ಸವದ ಮೂಲಕ ಕ್ರಮವಾಗಿ ಉಖಿಮಠ ಮತ್ತು ಖರ್‌ಸಾಲಿ ಸ್ಥಳಗಳಿಗೆ ಕರೆದೊಯ್ಯಲಾಯಿತು. ಈ ಎರಡು ವಿಗ್ರಹಗಳು ಒಂದೆರಡು ದಿನಗಳಲ್ಲಿ ನಿಗದಿತ ಸ್ಥಳವನ್ನು ತಲುಪಲಿವೆ.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ತೀರ್ಥಯಾತ್ರೆ ಆರಂಭವಾದಾಗಿನಿಂದ 4.50 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು 'ಚಾರ್‌
ಧಾಮ್'ಗೆ ಭೇಟಿ ನೀಡಿದ್ದಾರೆ.

ಗಂಗೋತ್ರಿ ದೇಗುಲದ ಬಾಗಿಲನ್ನು ಶುಕ್ರವಾರ ಮುಚ್ಚಲಾಗಿದೆ. ಬದರಿನಾಥ ದೇವಾಲಯದ ದ್ವಾರವನ್ನು ಇದೇ ತಿಂಗಳ 20ರಂದು ಮುಚ್ಚಲಾಗುವುದು. ಅಲ್ಲಿಗೆ ಈ ವರ್ಷದ ಚಾರ್‌ಧಾಮ್ ಯಾತ್ರೆ ಮುಕ್ತಾಯವಾದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.