ಅಪಘಾತ, –ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ
ತಿರುವನಂತಪುರ: ಕೊಚ್ಚಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕನಿಗೆ ಘಟನಾ ಸ್ಥಳದಲ್ಲೇ ರೇಜರ್ ಬ್ಲೇಡ್ ಮತ್ತು ಸ್ಟ್ರಾವನ್ನು ಬಳಸಿ ಮೂವರು ಯುವವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಆತನ ಪ್ರಾಣ ಉಳಿಸಿದ್ದಾರೆ. ಅವರ ಈ ಕಾರ್ಯಕ್ಕೆ ಕೇರಳದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಮನೂಪ್, ಕೊಚ್ಚಿಯ ಗಾಂಧಿ ಆಸ್ಪತ್ರೆಯ ಡಾ. ಥಾಮಸ್ ಪೀಟರ್ ಮತ್ತು ಡಾ.ದಿದಿಯಾ ಕೆ.ಥಾಮಸ್ ಮೂವರೂ ಸೇರಿ ಕ್ರಿಕೊಥೈರಾಯ್ಡೋಟಮಿ (ಪರ್ಯಾಯ ಮಾರ್ಗ ಅನುಸರಿಸಿ ಉಸಿರಾಟ ಸಮಸ್ಯೆ ಬಗೆಹರಿಸುವ ತುರ್ತು ಚಿಕಿತ್ಸೆ) ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಕೊಲ್ಲಂ ಮೂಲದ ಲಿನು ಎಂಬುವವರು ಭಾನುವಾರ ರಾತ್ರಿ ಕೊಚ್ಚಿಯ ಉದಯಂಪೆರೂರ್ನಲ್ಲಿ ರಸ್ತೆ ಅಪಘಾತದಿಂದ ಗಾಯಗೊಂಡಿದ್ದರು. ಇದೇ ವೇಳೆ ಮೂವರೂ ವೈದ್ಯರು ಅದೇ ಮಾರ್ಗದಲ್ಲಿ ತೆರಳುತ್ತಿದ್ದರು. ಲಿನು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಶ್ವಾಸನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಉಸಿರಾಡಲೂ ಕಷ್ಟವಾಗಿತ್ತು.
ಪೊಲೀಸರು ಮತ್ತು ಸ್ಥಳೀಯರ ಸಹಾಯ ಪಡೆದ ಮೂವರು ವೈದ್ಯರು, ರೇಜರ್ ಬ್ಲೇಡ್, ಪ್ಲಾಸ್ಟಿಕ್ ಕೊಳವೆಯನ್ನು (ಸ್ಟ್ರಾ) ಬಳಸಿ, ಮೊಬೈಲ್ ಬೆಳಕಿನಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಆನಂತರ ಗಾಯಾಳುವನ್ನು ಡಾ.ಅನೂಪ್ ಅವರೇ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೂ ಕರೆದೊಯ್ದಿದ್ದರು.
ಮೂವರೂ ಯುವವೈದ್ಯರ ಸಮಯಪ್ರಜ್ಞೆ ಮತ್ತು ಸೇವಾಕಾರ್ಯಕ್ಕೆ ಭಾರತೀಯ ವೈದ್ಯಕೀಯ ಸಂಘ ಮೆಚ್ಚುಗೆ ವ್ಯಕ್ತಪಡಿಸಿದೆ. ತುರ್ತು ಆರೈಕೆ ಮೂಲಕ ಈ ಮೂವರೂ ಇತರರಿಗೆ ಮಾದರಿಯಾಗಿದ್ದಾರೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಎಂ.ಎನ್. ಮೆನನ್ ಮತ್ತು ರಾಜ್ಯ ಕಾರ್ಯದರ್ಶಿ ಡಾ. ರಾಯ್ ಆರ್ ಚಂದ್ರನ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯ ಸಮೂಹ ಪ್ರಶಂಸೆಯ ಸುರಿಮಳೆಗೈದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.