ADVERTISEMENT

ಮುಂದಿನ ವಾರ ಪತ್ರಕರ್ತ ಸಿದ್ದಿಕ್‌ ಕಪ್ಪನ್‌ ಬಿಡುಗಡೆ: ಲಖನೌ ಜೈಲಿನ ಅಧಿಕಾರಿ

ಪಿಟಿಐ
Published 10 ಸೆಪ್ಟೆಂಬರ್ 2022, 1:34 IST
Last Updated 10 ಸೆಪ್ಟೆಂಬರ್ 2022, 1:34 IST
2020ರ ಅಕ್ಟೋಬರ್‌ 7ರಂದು ಪತ್ರಕರ್ತ ಸಿದ್ದಿಕ್‌ ಕಪ್ಪನ್‌ (ಎಡ) ಹಾಗೂ ಮತ್ತಿತರರನ್ನು ಮಥುರಾದ ಕೋರ್ಟ್‌ಗೆ ಹಾಜರು ಪಡಿಸಿದ ಸಂದರ್ಭದ ಸಂಗ್ರಹ ಚಿತ್ರ | ಪಿಟಿಐ
2020ರ ಅಕ್ಟೋಬರ್‌ 7ರಂದು ಪತ್ರಕರ್ತ ಸಿದ್ದಿಕ್‌ ಕಪ್ಪನ್‌ (ಎಡ) ಹಾಗೂ ಮತ್ತಿತರರನ್ನು ಮಥುರಾದ ಕೋರ್ಟ್‌ಗೆ ಹಾಜರು ಪಡಿಸಿದ ಸಂದರ್ಭದ ಸಂಗ್ರಹ ಚಿತ್ರ | ಪಿಟಿಐ   

ಲಖನೌ: ಕೇರಳದ ಪತ್ರಕರ್ತ ಸಿದ್ದಿಕ್‌ ಕಪ್ಪನ್‌ ಅವರನ್ನು ಲಖನೌ ಜೈಲಿನಿಂದ ಮುಂದಿನ ವಾರ ಬಿಡುಗಡೆ ಮಾಡಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಿಕ್‌ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದ ಬೆನ್ನಲ್ಲೇ ಜೈಲಿನ ಡಿಜಿಪಿ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಂತೋಷ್‌ ಕುಮಾರ್‌ ವರ್ಮಾ ಈ ಮಾಹಿತಿ ನೀಡಿದ್ದಾರೆ.

'ಸಿದ್ದಿಕ್‌ ಕಪ್ಪನ್‌ ಅವರನ್ನು ಲಖನೌ ಜೈಲಿನಲ್ಲಿ ಕಳೆದ ಕೆಲವು ತಿಂಗಳಿನಿಂದ ಇರಿಸಲಾಗಿದೆ. ಜಾಮೀನು ಆದೇಶದ ಪ್ರತಿ ಸಲ್ಲಿಕೆಯಾದ ಬಳಿಕ ಸಿದ್ದಿಕ್‌ ಅವರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಬಿಡುಗಡೆ ಮಾಡಲಾಗುವುದು' ಎಂದು ಸಂತೋಷ್‌ಕುಮಾರ್‌ ವರ್ಮಾ ತಿಳಿಸಿದ್ದಾರೆ.

2020ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗಾರಿಕೆ ಸಂಬಂಧ, ಹಾಥರಸ್‌ಗೆ ತೆರಳುತ್ತಿದ್ದಾಗ ಕಪ್ಪನ್‌ ಅವರನ್ನು ಬಂಧಿಸಲಾಗಿತ್ತು. ಪಿಎಫ್‌ಐ ಜೊತೆ ಸಂಬಂಧ ಹೊಂದಿರುವ ಕಪ್ಪನ್‌ ಅವರು ಗಲಭೆ ಸೃಷ್ಟಿಸುವ ಸಂಚು ರೂಪಿಸಿದ್ದರು ಎಂದು ಆರೋಪಿಸಿ ಮಥುರಾದ ಪೊಲೀಸರು ಬಂಧಿಸಿದ್ದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ಪರವಾಗಿ ನ್ಯಾಯ ಕೇಳುವುದು ಅಪರಾಧವೇ ಎಂದು ಛೀಮಾರಿ ಹಾಕಿರುವ ಸುಪ್ರೀಂ ಕೋರ್ಟ್‌, ವ್ಯವಸ್ಥೆಯಲ್ಲಿನ ಕೊರತೆಗಳನ್ನು ಎತ್ತಿತೋರಿಸಲು ಪ್ರತಿಭಟನೆಗಳು ಅನಿವಾರ್ಯ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.