ADVERTISEMENT

ಅಧಿಕಾರ ದುರುಪಯೋಗ; ಕೇರಳ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ

ಪಿಟಿಐ
Published 13 ಏಪ್ರಿಲ್ 2021, 9:39 IST
Last Updated 13 ಏಪ್ರಿಲ್ 2021, 9:39 IST
ಕೆ.ಟಿ. ಜಲೀಲ್
ಕೆ.ಟಿ. ಜಲೀಲ್   

ತಿರುವನಂತಪುರ: ಸಂಬಂಧಿಗೆ ಉದ್ಯೋಗವನ್ನು ಕೊಡಿಸಲು ಸಚಿವ ಸ್ಥಾನದ ಪ್ರಭಾವ ಬಳಸಿರುವ ಬಗ್ಗೆ ಲೋಕಾಯುಕ್ತರಿಂದ ಪ್ರತಿಕೂಲ ವರದಿಯ ಬೆನ್ನಲ್ಲೇ ಕೇರಳದ ಉನ್ನತ ಶಿಕ್ಷಣ ಸಚಿವ ಸ್ಥಾನಕ್ಕೆ ಕೆ.ಟಿ. ಜಲೀಲ್ ಅವರು ರಾಜೀನಾಮೆ ನೀಡಿದ್ದಾರೆ.

ಕೆ.ಟಿ. ಜಲೀಲ್ ಅವರು ತಮ್ಮ ರಾಜೀನಾಮೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಕಳುಹಿಸಿದ್ದಾರೆ. ಬಳಿಕ ಅದನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ತಮ್ಮ ರಾಜೀನಾಮೆಯನ್ನು ಕೆ.ಟಿ. ಜಲೀಲ್, ಫೇಸ್‌ಬುಕ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ. ಲೋಕಾಯುಕ್ತ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಕಂಡುಬಂದಿದೆ.

ADVERTISEMENT

ಲೋಕಾಯುಕ್ತ ವಿಭಾಗೀಯ ಪೀಠವು ಶುಕ್ರವಾರದಂದು ಜಲೀಲ್ ವಿರುದ್ಧ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ ಸಚಿವರು ಉನ್ನತ ಶಿಕ್ಷಣ ಹುದ್ದೆಯಲ್ಲಿ ಮುಂದುವರಿಯಲು ಯೋಗ್ಯರಲ್ಲ ಎಂದು ಹೇಳಿದೆ.

ಅಧಿಕಾರ ದುರುಪಯೋಗ, ಸ್ವಜನಪಕ್ಷವಪಾತ ಮತ್ತು ಆಪ್ತರಿಗೆ ಒಲವು ಮಾಡಿದ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಜಲೀಲ್ ಅವರ ಸೋದರ ಸಂಬಂಧಿ ಆದೀಬ್ ಎಂಬವರಿಗೆ ಕೇರಳ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ ಎಂದು ಮುಸ್ಲಿಂ ಯೂತ್ ಲೀಗ್ ನಾಯಕರು 2018 ನವೆಂಬರ್‌ನಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.