ADVERTISEMENT

ಮನಮೋಹನ್ ಸಿಂಗ್ ಹೇಳಿಕೆ ದೇಶದ ಜನರನ್ನು ಬೆಚ್ಚಿಬೀಳಿಸಿತ್ತು: ಬಜೆಟ್ ಜನಪರವಾಗಿತ್ತು

ಸೀಮೆಎಣ್ಣೆ 1991ರ ಬಜೆಟ್ ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು

ಉಮಾಶಂಕರ ಕಾರ್ಯ
Published 2 ಜುಲೈ 2019, 9:48 IST
Last Updated 2 ಜುಲೈ 2019, 9:48 IST
ಪ್ರಧಾನಿ ನರಸಿಂಹರಾವ್ ಅವರಿಗೆ ಪ್ರಮುಖ ವಿಚಾರವೊಂದನ್ನು ತಿಳಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಡಾ.ಮನಮೋಹನ್ ಸಿಂಗ್ (ಜೂನ್ 28, 1994ರ ಸಂಗ್ರಹ ಚಿತ್ರ).
ಪ್ರಧಾನಿ ನರಸಿಂಹರಾವ್ ಅವರಿಗೆ ಪ್ರಮುಖ ವಿಚಾರವೊಂದನ್ನು ತಿಳಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಡಾ.ಮನಮೋಹನ್ ಸಿಂಗ್ (ಜೂನ್ 28, 1994ರ ಸಂಗ್ರಹ ಚಿತ್ರ).   

ಅದು 1991ರ ಜುಲೈ ತಿಂಗಳು, ಕೇಂದ್ರ ಬಜೆಟ್‌‌ಗಾಗಿ ಜನರು ಕಾದು ಕುಳಿತಿದ್ದರು. ಪ್ರಧಾನಿ ಪಿ.ವಿ.ನರಸಿಂಹರಾವ್ ಹಾಗೂ ಅರ್ಥ ಸಚಿವ ಮನಮೋಹನ್ ಸಿಂಗ್ ಇಬ್ಬರು ಮೇದಾವಿಗಳ ಕೈಗೆ ಇಡೀ ಭಾರತದ ಆಡಳಿತದ ಚುಕ್ಕಾಣಿ ಸಿಕ್ಕಿತ್ತು. ಇಡೀ ದೇಶದ ಚಿತ್ತ ಇಬ್ಬರತ್ತ ನೆಟ್ಟಿತ್ತು. ಆ ಕಾಲದಲ್ಲಿಯೂ ದೇಶ ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿತ್ತು.

1991ರ ಮೇ 21ರಂದು ಎಲ್‌ಟಿಟಿಇ ಉಗ್ರರು ಸ್ಫೋಟಿಸಿದ ಆತ್ಮಾಹುತಿ ಬಾಂಬ್‌ಗೆ ಸಿಲುಕಿ ರಾಜೀವ್ ದುರಂತ ಸಾವಿಗೀಡಾಗಿದ್ದರು. ಅಲ್ಲಿಯವರೆಗೆ ರಾಜೀವ್ ದೇಶದ ಜನರ ಕಣ್ಣಲ್ಲಿ ಅಭಿವೃದ್ಧಿಯ ಆಶಾಕಿರಣ ಮೂಡಿಸಿದ್ದರು. ಬಡವರು, ಹಿಂದುಳಿದವರು, ಮಧ್ಯಮವರ್ಗದ ಜನರಿಗೆ ಯಾವುದೇ ತೊಂದರೆ ನೀಡದಂತೆ ದೇಶದವನ್ನು ಆರ್ಥಿಕವಾಗಿ ಬಲಾಢ್ಯವನ್ನಾಗಿ ಮಾಡಲು ರಾಜೀವ್ ಗಾಂಧಿ ಭರವಸೆ ನೀಡಿದ್ದರು. ಈ ಭರವಸೆ ಈಡೇರಿಸುವವರಿಗಾಗಿ ಭಾರತದ ಜನರು ಕಾಯುತ್ತಿದ್ದರು.

ಕಷ್ಟದ ದಿನಗಳನ್ನು ಎದುರಿಸಲು ಸಿದ್ಧರಾಗಿ: ಅರ್ಥ ಸಚಿವರಾಗಿದ್ದ ಡಾ.ಮನಮೋಹನ್ ಸಿಂಗ್ ಅವರು, ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಯಿಂದಾಗಿ ಮುಂದಿನ ಕಷ್ಟದ ದಿನಗಳನ್ನು ಎದುರಿಸಲು ಸಿದ್ಧರಾಗಿರಿ ಎಂಬ ಹೇಳಿಕೆ ನೀಡಿದ್ದರು. ಇದು ಜನರನ್ನು ಭಾವನಾತ್ಮಕವಾಗಿ ಮುಂದಿನ ದಿನಗಳನ್ನು ನೆನೆದು ಆತಂಕಪಡುವ ಮಟ್ಟಕ್ಕೆ ತಂದು ನಿಲ್ಲಿಸಿತ್ತು. ದೇಶದ ಜನರಿಗೆ ಬಜೆಟ್ ಮುನ್ನವೇ ಹೇಳಿಕೆ ನೀಡಿದ್ದು, ಇಡೀ ದೇಶದ ಜನರು ಚಿಂತಾಕ್ರಾಂತರಾಗಿದ್ದರು. ಸ್ವಾತಂತ್ರ್ಯ ಬಂದು ಸುಮಾರು 43 ವರ್ಷಗಳಾಗಿದ್ದವು. ಡಾ.ಮನಮೋಹನ್ ಸಿಂಗ್ ಅವರ ಈ ಹೇಳಿಕೆಯಿಂದಾಗಿ ದೇಶದ ಜನರ ಮನಸ್ಸಿನಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟುವುದೋ ಅಥವಾ ಈ ಎಲ್ಲಾ ಬೆಲೆಗಳನ್ನು ಈಗ ಇರುವ ಸ್ಥಿತಿಯಲ್ಲಿಯೇ ಮುಂದುವರಿಸುತ್ತಾರೆ ಎಂಬ ಆತಂಕ ಮನೆ ಮಾಡಿತ್ತು.

ADVERTISEMENT

ಅರ್ಥ ಸಚಿವರ ಈ ಹೇಳಿಕೆಯನ್ನು ಕೆಲವರು ಗೇಲಿ ಮಾಡಿದರು. ಇಷ್ಟು ವರ್ಷಗಳು ಇಡೀ ದೇಶದ ಜನರು ಸುಖವಾಗಿದ್ದರೇ, ಆಗಿನಿಂದಲೂ ಕಷ್ಟವೇ ಈಗಲೂ ಕಷ್ಟವೇ, ಮುಂದೆಯೂ ಕಷ್ಟವೇ ಎಂದು ಗೇಲಿ ಮಾಡಿದರು.

ದೇಶದ ಬಡವರ್ಗ ಹಾಗೂ ಮಧ್ಯಮವರ್ಗ ಅಡುಗೆಗೆ ಹೆಚ್ಚಾಗಿ ಬಳಸುತ್ತಿದ್ದುದು ಸೀಮೆಎಣ್ಣೆ, ಕಟ್ಟಿಗೆ. ಸೀಮೆಎಣ್ಣೆಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸರ್ಕಾರ ವಿತರಿಸುತ್ತಿತ್ತು. ಮಧ್ಯಮವರ್ಗದ ಜನರು ಅಂಗಡಿಗಳಲ್ಲಿ ಕೊಂಡುಕೊಳ್ಳುತ್ತಿದ್ದರು. ಹಳ್ಳಿಗಾಡಿನ ಜನರು ಕಟ್ಟಿಗೆಯನ್ನು ಅಡುಗೆಗಾಗಿ ಬಳಸುತ್ತಿದ್ದರು.ಅರ್ಥಸಚಿವರ ಹೇಳಿಕೆ ನಗರದ ಬಡ ಹಾಗೂ ಮಧ್ಯಮವರ್ಗದ ಜನರನ್ನು ಬೆಚ್ಚಿ ಬೀಳಿಸಿತ್ತು. ಯಾಕೆಂದರೆ, ಈ ವರ್ಗಗಳ ಜನರು ನಗರ ಪ್ರದೇಶಗಳಲ್ಲಿ ಸೀಮೆಎಣ್ಣೆ ಬಳಸುತ್ತಿದ್ದರು. ಪ್ರಧಾನಿ ಪಿ.ವಿ.ನರಸಿಂಹರಾವ್ ಹಾಗೂ ವಿತ್ತ ಸಚಿವ ಡಾ.ಮನಮೋಹನ್ ಸಿಂಗ್ ಇಬ್ಬರೂ ಸೇರಿ ಒಂದು ತಿಂಗಳ ಕಾಲ ಚರ್ಚೆ ನಡೆಸಿ ಅಳೆದೂ ಸುರಿದು ಜುಲೈ ತಿಂಗಳಲ್ಲಿ ಬಜೆಟ್ ಮಂಡನೆಗೆ ದಿನಾಂಕ ಗೊತ್ತುಪಡಿಸಿದರು.

ಸಿಂಗ್ ಹೇಳಿಕೆ ನೀಡಿದ್ಧರಿಂದ ಜನರು ಗೃಹೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತದೆ ಎಂದು ತಿಳಿದು ಫ್ಯಾನು, ಫ್ರಿಡ್ಜ್ , ವಾಶಿಂಗ್ ಮೆಷಿನ್, ಟಿವಿಗಳನ್ನು ಖರೀದಿಸಲು ಅಂಗಡಿಗಳಿಗೆ ಮಧ್ಯಮವರ್ಗದ ಜನರು ಮುಗಿಬಿದ್ದ ಪರಿಣಾಮ ದೇಶದ ಪ್ರಮುಖ ನಗರಗಳಲ್ಲಿರುವ ಅಂಗಡಿಗಳಲ್ಲಿ ನೂಕು ನುಗ್ಗಲು ಉಂಟಾಯಿತು.

ಆದರೆ, ಬಜೆಟ್ ದಿನ ಮನಮೋಹನ್ ಸಿಂಗ್ ಬಹಳ ಎಚ್ಚರಿಕೆಯ ನಡೆ ಇಟ್ಟಿದ್ದರು.ಎಲ್ಲರೂ ಅಚ್ಚರಿಪಡುವಂತಹ ಬಜೆಟ್ ಮಂಡಿಸಿದ್ದರು. ಐದು ತಿಂಗಳು ತಡವಾಗಿ ಬಜೆಟ್ ಮಂಡಿಸಿದರೂ ಎಲ್ಲಾ ವರ್ಗಗಳನ್ನೂ ಸಮಾಧಾನ ಪಡಿಸಲು ಯತ್ನಿಸಿದ್ದರು. ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣ ಕಿತ್ತುಹಾಕಿದರೂ ಆಹಾರ ಧಾನ್ಯ ಸಂಗ್ರಹ ದರವನ್ನು ಹೆಚ್ಚಿಸಲಾಗುವುದೆಂಬ ಭರವಸೆ ನೀಡಿ ಸಮಾಧಾನಪಡಿಸಿದ್ದರು.

ಹೆಚ್ಚಲಿಲ್ಲ ಸೀಮೆಎಣ್ಣೆ ದರ : ದೇಶದ ಮಧ್ಯಮವರ್ಗ, ಬಡ ಜನರು ನಿರೀಕ್ಷಿಸಿದಂತೆ ಸೀಮೆಎಣ್ಣೆ ದರ ಹೆಚ್ಚಿಸಲಿಲ್ಲ. ಬದಲಿಗೆ ಶೇ.10 ರಷ್ಟು ರಿಯಾಯಿತಿ ಘೋಷಿಸಿಬಿಟ್ಟರು. ಇದು ಬಡಜನರು ಹಾಗೂ ಮಧ್ಯಮವರ್ಗದ ಜನರು ನಿಟ್ಟುಸಿರು ಬಿಡುವಂತೆ ಮಾಡಿತು. 9724 ಕೋಟಿ ರೂಪಾಯಿಗಳ ಕೊರತೆ ಬಜೆಟ್ ಮಂಡಿಸಿದ ಸಿಂಗ್ ಪೆಟ್ರೋಲ್, ಅಡಿಗೆ ಅನಿಲ, ವಾಯು ಸಾರಿಗೆ, ಇಂಧನ ತೆರಿಗೆ ಪ್ರಮಾಣವನ್ನು ಶೇ.20ರಷ್ಟು ತೀವ್ರವಾಗಿ ಏರಿಸಿದರು.ಸಕ್ಕರೆ ಮೇಲಿನ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ ಕೆಲವು ಬಾಬುಗಳಿಗೆ ಎಕ್ಸೈಜ್ ಸುಂಕಗಳನ್ನು ಹೆಚ್ಚಿಸಿದರು. ಕಲರ್ ಟಿವಿ, ವಿಸಿಆರ್, ರೆಫ್ರಿಜರೇಟರ್, ಸಿಗರೇಟ್ ದುಬಾರಿ ಮಾಡಿದರು. ಸೈಕಲ್ಲುಗಳು ಹಾಗೂ ಖಾದ್ಯ ತೈಲಗಳಿಗೆ ಪೂರ್ಣ ವಿನಾಯಿತಿ ಘೋಷಿಸಿದರು.

ಈ ಸಾಲಿನ ಬಜೆಟ್ ಅನ್ನು ವಿತ್ತ ಸಚಿವ ಮನಮೋಹನ್ ಸಿಂಗ್ ಇದೊಂದು 'ಮಾನವೀಯ ಮುಖವುಳ್ಳ ಬಜೆಟ್' ಹೇಳಿಕೊಂಡರು. ಅಲ್ಲದೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಒಂದು ನಿಗಮ ಸ್ಥಾಪನೆ, ಕೋಮುಗಲಭೆಯಲ್ಲಿ ಅನಾಥವಾದ ಮಕ್ಕಳ ಯೋಗಕ್ಷೇಮಕ್ಕಾಗಿ ಒಂದು ಕಾರ್ಯಕ್ರಮ, ಗ್ರಾಮೀಣ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಯೋಜನೆಗಳು ಇವುಗಳಲ್ಲಿ ಪ್ರಮುಖವಾದವು. ಯಾವುದೇ ವರ್ಗದ ಜನರಿಗೂ ಹೊರೆಯಾಗದಂತೆ ಮನಮೋಹನ್ ಸಿಂಗ್ ಹಾಗೂ ಪಿ.ವಿ.ನರಸಿಂಹರಾವ್ ಅವರು ನೋಡಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.