ADVERTISEMENT

ಅಂಬೇಡ್ಕರ್‌ಗೆ ಅಪಮಾನ: ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಖರ್ಗೆ

ಪಿಟಿಐ
Published 19 ಡಿಸೆಂಬರ್ 2024, 7:26 IST
Last Updated 19 ಡಿಸೆಂಬರ್ 2024, 7:26 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಅಂಬೇಡ್ಕರ್ ಕುರಿತಂತೆ ನೀಡಿರುವ ಹೇಳಿಕೆ ವಿರೋಧಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.

ಶಾ ಅವರ ಹೇಳಿಕೆಗಳು ಸಂವಿಧಾನ ಶಿಲ್ಪಿಗೆ ಮಾಡಿದ ಅಪಮಾನ ಮತ್ತು ಸದನದ ಅವಹೇಳನಕ್ಕೆ ಸಮಾನವಾಗಿದೆ ಎಂದು ರಾಜ್ಯಸಭಾ ಸಭಾಪತಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಖರ್ಗೆ ಆರೋಪಿಸಿದ್ದಾರೆ.

‘ರಾಜ್ಯಸಭೆಯ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188ರ ಅಡಿಯಲ್ಲಿ ಗೃಹ ವ್ಯವಹಾರಗಳ ಸಚಿವರಾದ ಅಮಿತ್ ಶಾ ಅವರ ವಿರುದ್ಧ ಹಕ್ಕು ಚ್ಯುತಿ ನೋಟಿಸ್ ಅನ್ನು ನೀಡುತ್ತಿದ್ದೇನೆ’ ಎಂದು ಖರ್ಗೆ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಡಿಸೆಂಬರ್ 17ರಂದು,ರಾಜ್ಯಸಭೆಯಲ್ಲಿ 'ಭಾರತದ ಸಂವಿಧಾನದ 75 ವರ್ಷಗಳ ವೈಭವದ ಪಯಣ' ಕುರಿತ ಚರ್ಚೆಗೆ ನೀಡಿದ ಉತ್ತರದಲ್ಲಿ ಶಾ ಅವರು ಅಂಬೇಡ್ಕರ್ ಕುರಿತಂತೆ ‘ಅವಮಾನಕರ ಮತ್ತು ಮಾನಹಾನಿಕರ’ ಹೇಳಿಕೆ ನೀಡಿದ್ದರು ಎಂದು ಖರ್ಗೆ ಹೇಳಿದ್ದಾರೆ.

ಎಕ್ಸ್ ಪೋಸ್ಟ್‌ನಲ್ಲಿ ಖರ್ಗೆ ನೀಡಿರುವ ಹಕ್ಕುಚ್ಯುತಿ ನೋಟಿಸ್ ಹಂಚಿಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ’ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.