
ನವದೆಹಲಿ:‘ಕಾಂಗ್ರೆಸ್ನ 20–25 ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚೇಂಬರ್ಗೆ ತೆರಳಿದ್ದ ವೇಳೆ ಅವರನ್ನು ನಿಂದಿಸಿದ್ದಾರೆ. ಈ ವೇಳೆ, ಹಾಜರಿದ್ದ ಪಕ್ಷದ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಈ ಸಂಸದರನ್ನು ತಡೆಯಲಿಲ್ಲ’ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಬುಧವಾರ ಹೇಳಿದ್ದಾರೆ.
ಸಂಸತ್ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜಿಜು,‘ಈ ಘಟನೆಯಿಂದ ಬಿರ್ಲಾ ಬಹಳ ನೊಂದುಕೊಂಡಿದ್ದಾರೆ. ಬಿರ್ಲಾ ಅವರು ಮೃದುಸ್ವಭಾವದರಾಗಿದ್ದಾರೆ. ಇಲ್ಲದೇ ಹೋದರೆ ಈ ಸಂಸದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದರು’ ಎಂದಿದ್ದಾರೆ.
‘ಲೋಕಸಭೆಯ ಕೆಲ ಸದಸ್ಯರು ಬಿರ್ಲಾ ಅವರ ಚೇಂಬರ್ಗೆ ತೆರಳಿ, ಅವರನ್ನು ನಿಂದಿಸಿದರು. ನಂತರ, ಕಾಂಗ್ರೆಸ್ನ 20–25 ಸಂಸದರು ಕೂಡ ಚೇಂಬರ್ಗೆ ತೆರಳಿ ಅವರನ್ನು ನಿಂದಿಸಿದರು. ನಾನು ಕೂಡ ಅಲ್ಲಿ ಇದ್ದೆ. ಸ್ಪೀಕರ್ ವಿರುದ್ಧ ಕಾಂಗ್ರೆಸ್ ಸಂಸದರು ಬಳಸಿದ ಭಾಷೆ ಹೇಗೆ ಇತ್ತು ಎಂಬುದನ್ನು ಹೇಳಲು ನನಗೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.
‘ವೇಣುಗೋಪಾಲ್, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪಕ್ಷದ ಸಂಸದರನ್ನು ಹುರಿದುಂಬಿಸುತ್ತಿದ್ದರು. ನಮ್ಮ ಸಂಸದರೇನಾದರೂ ಆ ರೀತಿ ವರ್ತಿಸಲು ಮುಂದಾಗಿದ್ದಲ್ಲಿ ನಮ್ಮ ನಾಯಕರು ತಡೆಯುತ್ತಿದ್ದರು. ಆದರೆ, ಜಟಾಪಟಿ ನಡೆಸುವಂತೆ ಕಾಂಗ್ರೆಸ್ ನಾಯಕರೇ ತಮ್ಮ ಸಂಸದರಿಗೆ ಕುಮ್ಮಕ್ಕು ನೀಡುತ್ತಿದ್ದರು’ ಎಂದು ರಿಜಿಜು ಹೇಳಿದರು.
ಕಾಂಗ್ರೆಸ್ನಲ್ಲಿ ಸಾಕಷ್ಟು ಜನ ಸಮಚಿತ್ತದ ನಾಯಕರಿದ್ದಾರೆ. ಸಂಸತ್ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅವರು ರಾಹುಲ್ ಗಾಂಧಿ ಅವರಿಗೆ ಮಾರ್ಗದರ್ಶನ ಮಾಡಬೇಕುಕಿರಣ್ ರಿಜಿಜು ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.