ADVERTISEMENT

ಮಗಳ ಮದುವೆಗೆ ಮೀಸಲಿಟ್ಟ ಹಣ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2018, 14:16 IST
Last Updated 20 ಆಗಸ್ಟ್ 2018, 14:16 IST
ಸೌಮಿನಿ ಜೈನ್
ಸೌಮಿನಿ ಜೈನ್   

ಕೊಚ್ಚಿ: ಮಗಳ ಮದುವೆ ಖರ್ಚಿಗಾಗಿ ಮೀಸಲಿರಿಸಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲು ಕೊಚ್ಚಿ ಮೇಯರ್ ಸೌಮಿನಿ ಜೈನ್ ನಿರ್ಧರಿಸಿದ್ದಾರೆ. ಅದ್ದೂರಿಯಾಗಿ ಮದುವೆ ಮಾಡುವ ಬದಲು ಸರಳ ರೀತಿಯಲ್ಲಿ ಮದುವೆ ಮಾಡಲು ಸೌಮಿನಿ ಅವರ ಕುಟುಂಬ ತೀರ್ಮಾನಿಸಿದೆ.

ಬುಧವಾರ ಮೇಯರ್ ಮಗಳ ಮದುವೆ ನಡೆಯಲಿದೆ. ವಿವಾಹ ಕಾರ್ಯ ಮಾತ್ರ ನಡೆಸಿ ಇನ್ನುಳಿದ ಖರ್ಚುಗಳನ್ನು ಕೈ ಬಿಡಲು ನಾವು ತೀರ್ಮಾನಿಸಿದ್ದೇವೆ.ರಾಜ್ಯಕ್ಕೆ ರಾಜ್ಯವೇ ಪ್ರವಾಹದ ದುಃಖದಲ್ಲಿದೆ. ಈ ವೇಳೆ ಗೌಜು ಗದ್ದಲವಿಲ್ಲದೆ ಸರಳ ಮದುವೆ ನಡೆಸಲು ನಿರ್ಧರಿಸಿದ್ದೇವೆ.
ಸರಳ ಮದುವೆ ಸಾಕು ಎಂದು ಮಗಳು ಹೇಳಿದ್ದಳು. ಅದಕ್ಕೆ ವರನ ಮನೆಯವರೂ ಒಪ್ಪಿಕೊಂಡರು. ಆನಂತರವೇ ಅದ್ದೂರಿ ಮದುವೆ ಬೇಡ ಎಂದು ಆ ಹಣವನ್ನು ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದು ಎಂದು ಮೇಯರ್ ಹೇಳಿರುವುದಾಗಿ ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಮಗಳ ನಿಶ್ಚಿತಾರ್ಥ ರದ್ದು ಮಾಡಿ ಆ ಹಣವನ್ನು ಪರಿಹಾರ ನಿಧಿಗೆ ನೀಡಿದ ಅಪ್ಪ
ಸಿಪಿಎಂ ಮುಖವಾಣಿ ದೇಶಾಭಿಮಾನಿ ಪತ್ರಿಕೆಯ ರೆಸಿಡೆಂಟ್ ಎಡಿಟರ್ ಮನೋಜ್, ಮಗಳ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಿ ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಿದ್ದಾರೆ.ನಿನ್ನೆ (ಭಾನುವಾರ) ಮನೋಜ್ ಅವರ ಮಗಳು ದೇವಿ ಅವರ ನಿಶ್ಚಿತಾರ್ಥ ನ್ಯಾಯವಾದಿ ಸುಧಾಕರನ್ ಅವರ ಜತೆ ನಡೆಯಬೇಕಾಗಿತ್ತು. ಆದರೆ ಪ್ರವಾಹದಿಂದಾಗಿ ರಾಜ್ಯದ ಜನರು ಕಷ್ಟ ಅನುಭವಿಸುವಾಗ ಹೀಗೊಂದು ಕಾರ್ಯಕ್ರಮ ಬೇಡ ಎಂದು ಕುಟುಂಬ ನಿರ್ಧರಿಸಿತ್ತು.

ADVERTISEMENT

ನಿಶ್ಚಿತಾರ್ಥಕ್ಕಾಗಿ ತೆಗೆದಿರಿಸಿದ್ದ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲು ಎರಡೂ ಕುಟುಂಬಗಳು ತೀರ್ಮಾನಿಸಿರುವುದಾಗಿ ಮನೋಜ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.