ಜಾಮೀನು
ಕೋಟಯಂ (ಕೇರಳ): ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನ ರ್ಯಾಗಿಂಗ್ ಪ್ರಕರಣದ ಐವರು ಆರೋಪಿಗಳಿಗೆ ಕೇರಳ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ಅವರ ಸಣ್ಣ ಪ್ರಾಯ ಮತ್ತು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದರಿಂದ ಅವರು ಸುಧಾರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ.
ಸ್ಯಾಮ್ಯುಯೆಲ್ ಜಾನ್ಸನ್ (20), ರಾಹುಲ್ ರಾಜ್ (22), ಜೀವ್ (18), ರಿಜಿಲ್ ಜಿತ್ (20), ಮತ್ತು ವಿವೇಕ್ (21) ಅವರಿಗೆ ಕೋಟಯಂ ಸೆಷನ್ಸ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಕಿರಿಯ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ರ್ಯಾಗಿಂಗ್ ಮಾಡಿದ ಆರೋಪ ಇವರ ಮೇಲಿದೆ.
ಪ್ರಕರಣ ಸಂಬಂಧ ಫೆಬ್ರುವರಿ 12 ರಂದು ಆರೋಪಿಗಳನ್ನು ಬಂಧಿಸಲಾಗಿತ್ತು. ಎಟ್ಟುಮನೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕೋಟಯಂ ಸೆಷನ್ಸ್ ನ್ಯಾಯಾಲಯ ಮತ್ತು ಕೇರಳ ಹೈಕೋರ್ಟ್ನಿಂದ ಜಾಮೀನು ಪಡೆಯಲು ಅವರು ಮಾಡಿದ ಮೂರು ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು.
ಆರೋಪಿಗಳು ಕಳೆದ ವರ್ಷ ನವೆಂಬರ್ನಿಂದ ಕಿರಿಯ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದದ್ದು ಮಾತ್ರವಲ್ಲದೆ, ಮದ್ಯ ಖರೀದಿಸಲು ಅವರಿಂದ ನಿಯಮಿತವಾಗಿ ಹಣ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಿರಿಯ ವಿದ್ಯಾರ್ಥಿಯನ್ನು ಕ್ರೂರವಾಗಿ ರ್ಯಾಗಿಂಗ್ ಮಾಡುತ್ತಿರುವ ದೃಶ್ಯಗಳು ಈ ವರ್ಷದ ಫೆಬ್ರುವರಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಈ ದೌರ್ಜನ್ಯ ಬೆಳಕಿಗೆ ಬಂದಿತ್ತು.
ವಿದ್ಯಾರ್ಥಿಯೊಬ್ಬನನ್ನು ಮಂಚಕ್ಕೆ ಕಟ್ಟಿಹಾಕಿ ಚುಚ್ಚುವುದು ವಿಡಿಯೊದಲ್ಲಿ ದಾಖಲಾಗಿದೆ.
ವಿದ್ಯಾರ್ಥಿಯನ್ನು ಅರೆ ಬೆತ್ತಲೆಗೊಳಿಸಿ ಭಯಾನಕವಾಗಿ ಹಿಂಸಿಸಲಾಗಿದೆ. ಮಂಚಕ್ಕೆ ಕಟ್ಟಿಹಾಕಿ ಆತನ ಖಾಸಗಿ ಭಾಗಗಳಿಗೆ ಡಂಬಲ್ಸ್ಗಳನ್ನು ಇಟ್ಟು ಬಾಯಿಗೆ ಫೇಶಿಯಲ್ ಕ್ರೀಮ್ ಸುರಿಯಲಾಗಿದೆ.
ಘಟನೆ ಸಂಬಂಧ ಐವರು ಆರೋಪಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾಗೊಳಿಸಲಾಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜಿನ ಅಡಿಯಲ್ಲಿ ಕಾರ್ಯನಿರ್ವಹಿಸುವ ನರ್ಸಿಂಗ್ ಕಾಲೇಜಿನಲ್ಲಿ ಸುಮಾರು ಮೂರು ತಿಂಗಳಿನಿಂದ ರ್ಯಾಗಿಂಗ್ ನಡೆಯುತ್ತಿದೆ ಎಂಬ ದೂರಿನ ಮೇರೆಗೆ, ರ್ಯಾಗಿಂಗ್ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ ಇವರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.