ADVERTISEMENT

ಕೇರಳ ವಿಮಾನ ದುರಂತ: ಸಂತ್ರಸ್ತರಿಗೆ ನೆರವು ನೀಡಲು ಮೂರು ವಿಶೇಷ ವಿಮಾನಗಳು

ಕೇರಳ ತಲುಪಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಮುಖ್ಯ ಅಧಿಕಾರಿಗಳು

ಏಜೆನ್ಸೀಸ್
Published 8 ಆಗಸ್ಟ್ 2020, 5:45 IST
Last Updated 8 ಆಗಸ್ಟ್ 2020, 5:45 IST
ಕೇರಳದ ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ
ಕೇರಳದ ಕೋಯಿಕ್ಕೋಡ್‌ನಲ್ಲಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ   

ನವದೆಹಲಿ: ವಿಮಾನ ಅಪಘಾತದಿಂದ ಸಂಕಷ್ಟದಲ್ಲಿ ಸಿಲುಕಿರುವ ಪ್ರಯಾಣಿಕರ ಕುಟುಂಬಕ್ಕೆ ನೆರವಾಗಲು ಮೂರು ವಿಶೇಷ ವಿಮಾನಗಳನ್ನು ಕೇರಳದ ಕೋಯಿಕ್ಕೋಡ್‌ಗೆ ಕಳುಹಿಸಲಾಗಿದೆ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಯಾನ ಸಂಸ್ಥೆ ತಿಳಿಸಿದೆ.

ವಿಮಾನ ಅಪಘಾತದಲ್ಲಿ ಸಂತ್ರಸ್ತರಾಗಿರುವ ಕುಟುಂಬ ಸದಸ್ಯರಿಗೆ ಮಾನವೀಯ ನೆರವು ನೀಡಲು ದೆಹಲಿಯಿಂದ ಎರಡು ಮತ್ತು ಮುಂಬೈನಿಂದ ಒಂದು ವಿಶೇಷ ವಿಮಾನಗಳನ್ನು ಕೋಯಿಕ್ಕೋಡ್‌ಗೆ ಕಳುಹಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಶ್ಯಾಮ್‌ಸುಂದರ್‌ ಅವರು ಕೋಯಿಕ್ಕೋಡ್ ತಲುಪಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ತುರ್ತು ಪ್ರತಿಕ್ರಿಯೆ ವಿಭಾಗದ ನಿರ್ದೇಶಕರು ಕ್ಯಾಲಿಕಟ್‌ನಲ್ಲಿರುವ ಸಂಬಂಧಪಟ್ಟ ಎಲ್ಲ ಇಲಾಖೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅದೇ ರೀತಿ ಮುಂಬೈ, ದೆಹಲಿ ಮತ್ತು ದುಬೈನ ತುರ್ತು ಪ್ರತಿಕ್ರಿಯಾ ವಿಭಾಗದೊಂದಿಗೂ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನಯಾನ ಅಪಘಾತ ತನಿಖಾ ಸಂಸ್ಥೆ (ಎಎಐಪಿ), ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕ ಮತ್ತು ವಿಮಾನ ಸುರಕ್ಷತಾ ವಿಭಾಗಗಳು ಈಗಾಗಲೇ ಅಪಘಾತ ಸ್ಥಳವನ್ನು ತಲುಪಿದ್ದು, ಪ್ರಕರಣದ ತನಿಖೆ ಕೈಗೊಂಡಿವೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ದುಬೈನಲ್ಲಿ ಸಿಲುಕಿದ್ದ 190 ಭಾರತೀಯ ನಿವಾಸಿಗಳನ್ನು ಕರೆತರುತ್ತಿದ್ದ ಬೋಯಿಂಗ್ 737 ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ, ಶುಕ್ರವಾರ ಭಾರಿ ಮಳೆಯಿಂದಾಗಿ ಕೋಯಿಕ್ಕೋಡ್‌ನ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಳಿಯುವ ವೇಳೆ 35 ಅಡಿ ಕಣಿವೆಗೆ ಬಿದ್ದು ಅಪಘಾತಕ್ಕೀಡಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.