ADVERTISEMENT

ಕೋಯಿಕ್ಕೋಡ್‌ ವಿಮಾನ ದುರಂತಕ್ಕೆ ಕಾರಣಗಳೇನು? ಇಲ್ಲಿದೆ ವರದಿಯ ಪ್ರಮುಖಾಂಶಗಳು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 16:23 IST
Last Updated 11 ಸೆಪ್ಟೆಂಬರ್ 2021, 16:23 IST
ದುರಂತಕ್ಕೀಡಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಪಿಟಿಐ)
ದುರಂತಕ್ಕೀಡಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಪಿಟಿಐ)   

ದೆಹಲಿ: ಕಳೆದ ವರ್ಷ ಆಗಸ್ಟ್‌ 7ರಂದು ಕೇರಳದ ಕೋಯಿಕ್ಕೋಡ್‌ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುರಂತ ಪ್ರಕರಣದ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶನಿವಾರ ಸಲ್ಲಿಸಲಾಗಿದೆ.

ವಿಮಾನ ದುರಂತದ ತನಿಖೆಗಾಗಿ ರಚನೆಯಾಗಿದ್ದ ವಿಮಾನ ಅಪಘಾತ ತನಿಖಾ ತಂಡವು ಹೆಚ್ಚು ಕಡಿಮೆ ಒಂದು ವರ್ಷದ ನಂತರ ವರದಿ ಸಲ್ಲಿಸಿದೆ.

ADVERTISEMENT

ವಿಮಾನವು ರನ್‌ವೇ ಮತ್ತು ರನ್‌ವೇನ ಸುರಕ್ಷತಾ ವಲಯ ದಾಟಿ ಹೋಗಿ ಅಪಘಾತಕ್ಕೀಡಾಗಿದೆ. ನಂತರ ಟೇಬಲ್‌ ಟಾಪ್‌ ರನ್‌ವೇನಿಂದ ಕೆಳಕ್ಕೆ ಉರುಳಿದೆ. ಹೀಗಾಗಿ ವಿಮಾನವು ಮೂರು ಭಾಗಗಳಾಗಿ ಒಡೆದಿತ್ತು. ವಿಮಾನದ ಎರಡೂ ‘ವಿಂಗ್ ಟ್ಯಾಂಕ್‌’ಗಳಿಂದ ಇಂಧನ ಸೋರಿಕೆಯಾಗಿತ್ತಾದರೂ, ಬೆಂಕಿ ಹೊತ್ತಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್‌ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಸರಿಸದೇ ಇರುವುದೇ ವಿಮಾನ ಅಪಘಾತಕ್ಕೆ ಸಂಭವನೀಯ ಕಾರಣ ಎಂದು ಹೇಳಿದೆ.

ವಿಮಾನ ಚಲಾಯಿಸುತ್ತಿದ್ದ ಪೈಲಟ್‌ ತಾನು ಅನುಸರಿಸಿದ್ದ ಅಸ್ಥಿರ ವಿಧಾನವನ್ನೇ ಸಂದಿಗ್ಧ ಪರಿಸ್ಥಿತಿಯಲ್ಲೂ ಮುಂದುವರಿಸಿದ್ದರು. ‘ಪೈಲಟ್‌ ಮಾನಿಟರಿಂಗ್‌’ನ ‘ಗೋ ಅರೌಂಡ್‌’ ಸೂಚನೆಯನ್ನು ಅವರು ಅನುಸರಿಸದೇ, ಟಚ್‌ಡೌನ್ ವಲಯವನ್ನು ಮೀರಿ ಲ್ಯಾಂಡ್‌ ಮಾಡಲೆತ್ನಿಸಿದ್ದರು. ಪೈಲಟ್‌ ಮಾನಿಟರಿಂಗ್‌ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದರು. ಅಲ್ಲದೆ, ‘ಗೋ ಅರೌಂಡ್‌’ ಕಾರ್ಯಗತಗೊಳಿಸಲೂ ಅವರಿಂದ ಆಗಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.