ನವದೆಹಲಿ: ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯನ್ನುಟೀಕಿಸಿದ್ದಕ್ಕಾಗಿ ಅಲ್ಲಿನ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ ಅವರುಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನುಟ್ವಿಟರ್ವಾಲಿ ನೇತಾ ಎಂದು ಲೇವಡಿ ಮಾಡಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಅತೀ ಹೆಚ್ಚು ನಡೆಯುತ್ತಿರುವುದು ಉತ್ತರ ಪ್ರದೇಶದಲ್ಲಿ. ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ(ಎನ್ಸಿಆರ್ಬಿ) 2017ರ ಅಂಕಿ ಅಂಶದ ಪ್ರಕಾರ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ. ಇದನ್ನು ಉಲ್ಲೇಖಿಸಿದ ಪ್ರಿಯಾಂಕಾ ಗಾಂಧಿ ಇದು ನಾಚಿಕೆಗೇಡು ಎಂದು ಯೋಗಿ ಆದಿತ್ಯನಾಥ ಸರ್ಕಾರ ವಿರುದ್ಧ ಕಿಡಿ ಕಾರಿದ್ದರು.
ಪ್ರಿಯಾಂಕಾ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಮೌರ್ಯ, ಆಕೆ ಟ್ವಿಟರ್ವಾಲಿ ನೇತಾ. ಅಮೇಠಿಯಲ್ಲಿ ಆಕೆಯ ಸಹೋದರ ಪರಾಭವಗೊಳ್ಳುವಂತೆ ಮಾಡಿದರು. ಅವರು ಏನು ಹೇಳುತ್ತಾರೆ ಎಂಬುದು ನಮಗೆ ಅಗತ್ಯವಿಲ್ಲ. ಇಲ್ಲಿನ ಕಾನೂನು ವ್ಯವಸ್ಥೆ ಸುದೃಢಗೊಳಿಸಲು ನಾವು ಅಗತ್ಯ ಕ್ರಮಕೈಗೊಂಡಿದ್ದೇವೆ ಎಂಬುದು ಮುಖ್ಯ ಎಂದು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಲೋಕಸಭಾ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿರುಸಿನ ಪ್ರಚಾರ ಮಾಡಿದ್ದರು. ಆದರೆ ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಮಾತ್ರ ಗೆಲುವು ಸಾಧಿಸಿದ್ದರು.
ಉತ್ತರ ಪ್ರದೇಶ ಸರ್ಕಾರದ ಅವ್ಯವಸ್ಥೆ ಬಗ್ಗೆ ಪ್ರಿಯಾಂಕಾ ಗಾಂಧಿ ಸದಾ ಟೀಕಿಸುತ್ತಿರುತ್ತಾರೆ.
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಅತೀ ಹೆಚ್ಚು ಇರುವುದು ಉತ್ತರ ಪ್ರದೇಶದಲ್ಲಿ. ಪ್ರತಿವರ್ಷ ಇಲ್ಲಿ 56,000ಕ್ಕಿಂತ ಹೆಚ್ಚು ಪ್ರಕರಣಗಳು ನಡೆಯುತ್ತಿದ್ದು ಹೆಚ್ಚಿನದ್ದು ವರದಿಯಾಗುವುದಿಲ್ಲ. ಈ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿಯವರಿಗೆ ಇದು ಸಾಕಲ್ಲವೇ ಎಂದು ಪ್ರಿಯಾಂಕಾ ಮಂಗಳವಾರ ಟ್ವೀಟಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.