ADVERTISEMENT

ಲಖಿಮ್‌ಪುರ ಹಿಂಸಾಚಾರ: ನನ್ನ ಮಗ ಅಲ್ಲಿರಲಿಲ್ಲ, ಕೇಂದ್ರ ಮಂತ್ರಿ ಅಜಯ್‌ ಮಿಶ್ರಾ

ಪಿಟಿಐ
Published 3 ಅಕ್ಟೋಬರ್ 2021, 15:51 IST
Last Updated 3 ಅಕ್ಟೋಬರ್ 2021, 15:51 IST
ಉತ್ತರ ಪ್ರದೇಶದ ಲಖಿಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಕೃತ್ಯ
ಉತ್ತರ ಪ್ರದೇಶದ ಲಖಿಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಕೃತ್ಯ   

ನವದೆಹಲಿ: ಉತ್ತರ ಪ್ರದೇಶದ ಲಖಿಮ್‌ಪುರ ಖೇರಿಯಲ್ಲಿ ನಡೆದ ಹಿಂಸಾಕೃತ್ಯದ ಸಂದರ್ಭ ತಮ್ಮ ಮಗ ಸ್ಥಳದಲ್ಲಿ ಇರಲಿಲ್ಲ. ಇದಕ್ಕೆ ವಿಡಿಯೋ ಸಾಕ್ಷಿ ಇದೆ ಎಂದು ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

ಮೂವರು ಬಿಜೆಪಿ ಸದಸ್ಯರಿಗೆ, ಓರ್ವ ಕಾರು ಚಾಲಕನಿಗೆ ರೈತರ ಪ್ರತಿಭಟನೆ ಹೆಸರಲ್ಲಿ ನೆರೆದಿದ್ದ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲಖಿಮ್‌ಪುರ ಖೇರಿಯಲ್ಲಿ ನಡೆದ ಘಟನೆಯ ಸಂದರ್ಭ ನನ್ನ ಮಗ ಅಲ್ಲಿ ಇರಲಿಲ್ಲ. ಇದಕ್ಕೆ ವಿಡಿಯೋ ಸಾಕ್ಷಿಯಿದೆ ಎಂದು 'ಪಿಟಿಐ'ಗೆ ಅಜಯ್‌ ಕುಮಾರ್‌ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕಾರು ಉರುಳಿದೆ. ಈ ಸಂದರ್ಭ ಇಬ್ಬರು ಕಾರಿನ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಅಜಯ್‌ ಕುಮಾರ್‌ ಆರೋಪಿಸಿದ್ದಾರೆ.

ADVERTISEMENT

ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡ ರಾಕೇಶ್‌ ಟಿಕಾಯತ್‌ ಲಖಿಮ್‌ಪುರ ಖೇರಿಯ ಘಟನಾ ಸ್ಥಳಕ್ಕೆ ಬೆಂಬಲಿಗರ ಜೊತೆ ಧಾವಿಸಿದ್ದಾರೆ.

ಟಿಕುನಿಯಾದಲ್ಲಿ ಕಾರ್ಯಕ್ರಮವೊಂದಕ್ಕೆ ಹಾಜರಾಗಬೇಕಿದ್ದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ವಿರುದ್ಧ ಕಪ್ಪು ಬಾವುಟಗಳನ್ನು ಪ್ರದರ್ಶಿಸಲು ರೈತರು ಮುಂದಾಗಿದ್ದರು. ಮೌರ್ಯ ಅವರನ್ನು ಕರೆತರಲು ಅಜಯ್‌ ಕುಮಾರ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಮತ್ತು ಜೊತೆಗಾರರು ಕಾರಿನಲ್ಲಿ ತೆರಳಿದ್ದರು. ಈ ಸಂದರ್ಭ ಕಪ್ಪು ಬಾವುಟ ತೋರಿಸಿದ ರೈತರತ್ತ ಕಾರು ಹರಿಸಲಾಗಿದ್ದು, ಇಬ್ಬರು ರೈತರು ಮೃತಪಟ್ಟಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಕೇಂದ್ರ ಮಂತ್ರಿಯ ಮಗ ಕಾರು ಹರಿಸಿ ರೈತರನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರು ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.