ADVERTISEMENT

ಬಿಹಾರ: ತೇಜಸ್ವಿ-ಚಿರಾಗ್‌ ಮೈತ್ರಿ ಬೆಂಬಲಿಸಿದ ಲಾಲು ಪ್ರಸಾದ್‌ ಯಾದವ್‌

ಏಜೆನ್ಸೀಸ್
Published 3 ಆಗಸ್ಟ್ 2021, 18:21 IST
Last Updated 3 ಆಗಸ್ಟ್ 2021, 18:21 IST
ಲಾಲು ಪ್ರಸಾದ್‌ ಯಾದವ್‌ ಅವರ ಸಾಂದರ್ಭಿಕ ಚಿತ್ರ
ಲಾಲು ಪ್ರಸಾದ್‌ ಯಾದವ್‌ ಅವರ ಸಾಂದರ್ಭಿಕ ಚಿತ್ರ   

ಪಟನಾ: ಬಿಹಾರದಲ್ಲಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಜೊತೆ ತಮ್ಮ ಮಗ ತೇಜಸ್ವಿ ಯಾದವ್‌ ಮೈತ್ರಿ ಮಾಡಿಕೊಂಡಿದ್ದನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಬೆಂಬಲಿಸಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಪಶುಪತಿ ಕುಮಾರ್‌ ಪರಾಸ್‌ ನೇತೃತ್ವದ ಎಲ್‌ಜೆಪಿಯ ಐವರು ಸಂಸದರು ಪಕ್ಷದ ವಿರುದ್ಧ ಬಂಡಾಯವೆದ್ದಿರುವ ನಡುವೆ, ಚಿರಾಗ್‌ ಅವರನ್ನು ಎಲ್‌ಜೆಪಿ ಮುಖಂಡ ಎಂದು ಕರೆದಿರುವ ಲಾಲು ಪ್ರಸಾದ್‌, 'ಅವರ ಪಕ್ಷದಲ್ಲಿ ಏನೇ ನಡೆಯುತ್ತಿದ್ದರು ಚಿರಾಗ್‌ ಪಾಸ್ವಾನ್‌ ಎಲ್‌ಜೆಪಿ ನಾಯಕ' ಎಂದು ಉಲ್ಲೇಖಿಸಿದ್ದಾರೆ.

'ಹೌದು, ಅವರಿಬ್ಬರು ಜೊತೆಯಾಗಿ ಇರಬೇಕು' ಎಂದು ತೇಜಸ್ವಿ ಮತ್ತು ಚಿರಾಗ್‌ ಅವರನ್ನು ಉದ್ದೇಶಿಸಿ ಲಾಲು ಪ್ರಸಾದ್‌ ಯಾದವ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಮುಖ್ಯಮಂತ್ರಿನಿತೀಶ್‌ ಕುಮಾರ್‌ ವಿರುದ್ಧ ಹರಿಹಾಯ್ದ ಲಾಲು ಪ್ರಸಾದ್‌, 'ಕಳೆದ ವರ್ಷನಾವು ಬಿಹಾರದಲ್ಲಿ ಸರ್ಕಾರ ರಚಿಸುವ ಹಂತದಲ್ಲಿದ್ದೆವು. ನಾನು ಜೈಲಿನಲ್ಲಿದ್ದೆ. ನನ್ನ ಮಗ ತೇಜಸ್ವಿ ಯಾದವ್‌ ಅವರ ವಿರುದ್ಧ(ಈಗಿನ ಮೈತ್ರಿ ಸರ್ಕಾರ) ಒಬ್ಬಂಟಿಯಾಗಿ ಹೋರಾಟ ನಡೆಸಿದ. ಅವರು ಮೋಸ ಮಾಡಿದರು. ನಮ್ಮನ್ನು 10-15 ಮತಗಳಿಂದ ಸೋಲುವಂತೆ ಮಾಡಿದರು' ಎಂದು ಆರೋಪಿಸಿದ್ದಾರೆ.

ಅನಾರೋಗ್ಯದಿಂದ ಚೇತರಿಸಿಕೊಂಡ ಶರದ್‌ ಯಾದವ್‌ ಅವರನ್ನು ಭೇಟಿ ಮಾಡಿದ ಲಾಲು ಪ್ರಸಾದ್ ಸುಮಾರು ಒಂದು ಗಂಟೆ ವರೆಗೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮದ ಜೊತೆ ಮಾತನಾಡಿದ ಲಾಲು ಪ್ರಸಾದ್‌, 'ಸಂಸತ್ತಿನಲ್ಲಿ ಶರದ್‌ ಯಾದವ್‌, ಮುಲಾಯಂ ಸಿಂಗ್‌ ಯಾದವ್‌ ಮತ್ತು ನನ್ನಂತಹ ಸಮಾಜವಾದಿ ನಾಯಕರು ಇಲ್ಲದಿರುವುದರಿಂದ ಜನರಿಗೆ ಸಂಬಂಧಿಸಿದ ಚರ್ಚೆಗಳನ್ನು ಕಡೆಗಣಿಸಲಾಗುತ್ತಿದೆ' ಎಂದರು.

ಪೆಗಾಸಸ್‌ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿ, ಇದರಲ್ಲಿ ಭಾಗಿಯಾದವರ ಹೆಸರನ್ನು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಸೋಮವಾರ ಸಮಾಜವಾದಿ ಪಕ್ಷದನಾಯಕ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅವರ ಮಗ ಅಖಿಲೇಶ್‌ ಯಾದವ್‌ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ನಂತರ ಭೇಟಿಯ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡ ಲಾಲು ಪ್ರಸಾದ್, ಇಂದು ರಾಷ್ಟ್ರಕ್ಕೆ ಬೇಕಿರುವುದು ಸಮಾನತೆ ಮತ್ತು ಸಮಾಜವಾದ. ಕೋಮುವಾದ ಮತ್ತು ಬಂಡವಾಳಶಾಹಿ ಅಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.