ಬನಿಹಾಲ್, ಜಮ್ಮು: ಭಾರಿ ಮಳೆ ಮತ್ತು ಭೂಕುಸಿತದ ಪರಿಣಾಮ ಜಮ್ಮು ಮತ್ತು ಶ್ರೀನಗರ ನಡುವಣ, 270 ಕಿ.ಮೀ ಅಂತರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ, ಈ ಋತುವಿನ ಮೊದಲ ಹಿಮಪಾತದ ಕಾರಣ ಮೊಘಲ್ ರಸ್ತೆ ಸೇರಿ ವಿವಿಧೆಡೆ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಕಾಶ್ಮೀರದ ಜೊತೆಗೆ ದೇಶದ ಇತರೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯು ಸರ್ವಋತು ರಸ್ತೆಯಾಗಿದೆ. ಕೆಫೆಟೇರಿಯಾ ಮೊರ್ಹ್ ಬಳಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಎಸ್ಪಿ ಶಬೀರ್ ಮಲ್ಲಿಕ್ ಅವರು ತಿಳಿಸಿದ್ದಾರೆ.
ಅಲ್ಲದೆ, ವಿವಿಧೆಡೆ ಬೆಟ್ಟ ಪ್ರದೇಶದಿಂದ ಉರುಳಿರುವ ಬಂಡೆಗಳು ಹೆದ್ದಾರಿಗೆ ಅಡ್ಡಲಾಗಿ ಬಿದ್ದಿವೆ. ರಂಬನ್–ಬನಿಹಾಲ್ ಮತ್ತು ಮೌಂಪಸ್ಸಿ ಬಳಿ ಇಂತಹ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದರು.
ಮಳೆಯಿಂದಾಗಿ ಪರಿಸ್ಥಿತಿಯನ್ನು ಸರಿಪಡಿಸುವುದು ಕಷ್ಟವಾಗಿದೆ. ಭೂಕುಸಿತ ಆಗಿರುವ ಕಡೆ ಅವಶೇಷ ತೆರವುಗೊಳಿಸಲು ಕನಿಷ್ಠ ಐದು ಗಂಟೆ ಬೇಕಾಗಿದೆ. ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ ಎಂದು ವಿವರಿಸಿದರು.
ಮೊಘಲ್ ರಸ್ತೆಯು ಪೂಂಛ್ ಮತ್ತು ರಾಜೌರಿ ಜಿಲ್ಲೆಗಳನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವಾಗಿದ್ದು, ಶನಿವಾರ ರಾತ್ರಿ ಪೀರ್ ಕೀ ಗಲಿ ಭಾಗದಲ್ಲಿ ಆಗಿರುವ ಹಿಮಪಾತದ ಕಾರಣ ವಾಹನ ಸಂಚಾರ ಬಂದ್ ಆಗಿದೆ. ಮೊಘಲ್ ರಸ್ತೆ ಹೊರತುಪಡಿಸಿ, ರಂಬನ್, ದೋಡಾ, ಕಿಶ್ತ್ವಾರ್, ಪೂಂಛ್, ರಾಜೌರಿ, ರೇಸಿ ಜಿಲ್ಲೆಗಲ್ಲೂ ಹಿಮಪಾತವಾಗಿದೆ.
ಹವಾಮಾನ ಇಲಾಖೆಯ ಸಿಬ್ಬಂದಿ ಪ್ರಕಾರ, ಮುಂದಿನ 12 ಗಂಟೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಬನಿಹಿಲ್ನಲ್ಲಿ ಕಳೆದ 12 ಗಂಟೆಗಳಲ್ಲಿ 47.8 ಮಿಲಿ ಮೀಟರ್ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.