ಮೀಸಲಾತಿ
ನವದೆಹಲಿ: ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಮಾದರಿಯಲ್ಲಿ ನಡೆಯುವ ಹುದ್ದೆ ಭರ್ತಿಯಲ್ಲಿ ಮೀಸಲಾತಿ ಅನ್ವಯಿಸದು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಗುರುವಾರ ಹೇಳಿದೆ.
ಖಾಸಗಿ ಕ್ಷೇತ್ರದಿಂದ ಸರ್ಕಾರದ ಯಾವುದೇ ಇಲಾಖೆಗಳಿಗೆ ನೇಮಕವಾಗುವ ತಜ್ಞರನ್ನು ಉಲ್ಲೇಖಿಸಿ ಸರ್ಕಾರ ಈ ಹೇಳಿಕೆ ನೀಡಿದೆ.
‘ಈವರೆಗೂ 63 ನೇಮಕಾತಿಗಳು ಇದೇ ಮಾದರಿಯಲ್ಲಿ ನಡೆದಿವೆ. ಜಂಟಿ ಕಾರ್ಯದರ್ಶಿ, ನಿರ್ದೇಶಕ, ಗುತ್ತಿಗೆ ಆಧಾರದಲ್ಲಿ ಉಪ ಕಾರ್ಯದರ್ಶಿ, ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳು ಇದರಲ್ಲಿ ಒಳಗೊಂಡಿದೆ. 2018ರಿಂದ ಮೂರು ಹಂತಗಳಲ್ಲಿ (2018, 2021 ಮತ್ತು 2023) ನೇಮಕಾತಿ ನಡೆದಿದೆ’ ಎಂದು ಸಚಿವ ಜತೇಂದ್ರ ಸಿಂಗ್ ಅವರು ಲಿಖಿತ ರೂಪದಲ್ಲಿ ರಾಜ್ಯಸಭೆಗೆ ತಿಳಿಸಿದ್ದಾರೆ.
‘ವ್ಯಕ್ತಿಗಳ ವೃತ್ತಿ ಜ್ಞಾನ ಮತ್ತು ಅನುಭವವನ್ನು ಆಧರಿಸಿ ಕೆಲ ನಿರ್ದಿಷ್ಟ ಉದ್ದೇಶಗಳಿಗೆ ಈ ನೇಮಕಾತಿಗಳು ನಡೆದಿವೆ. ಒಂದೊಂದೇ ಹುದ್ದೆಗಳಿಗೆ ಈ ನೇಮಕಾತಿಗಳು ನಡೆದಿವೆ. PGIMER, ಚಂಡೀಗಢ ವರ್ಸಸ್ ಬೋಧಕರ ಸಂಘ ಮತ್ತು ಇತರರು’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ತೀರ್ಪು ಪ್ರಕಾರ ಮೀಸಲಾತಿ ಅನ್ವಯಿಸದು. ಜತೆಗೆ ಅವರ ವರ್ಗಗಳಿಗೆ ಅನುಗುಣವಾಗಿ ನೇಮಕಗೊಂಡವರ ಮಾಹಿತಿಯನ್ನೂ ದಾಖಲಿಸಿಲ್ಲ. ವಿವಿಧ ಇಲಾಖೆ ಹಾಗೂ ಸಚಿವಾಲಯಗಳಲ್ಲಿ ಸದ್ಯ 43 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಮೀಸಲಾತಿಗೆ ಅವಕಾಶ ನೀಡದಿರುವ ಕುರಿತ ರಾಜಕೀಯ ಜಟಾಪಟಿ ಆಧರಿಸಿ ವಿವಿಧ ಇಲಾಖೆಗಳಿಗೆ ಲ್ಯಾಟರಲ್ ಎಂಟ್ರಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಕೇಂದ್ರ ಲೋಕಸೇವಾ ಆಯೋಗವು 2024ರ ಆಗಸ್ಟ್ನಿಂದ ಪ್ರಕಟಣೆ ನೀಡುವುದನ್ನು ನಿಲ್ಲಿಸಿದೆ. ಇದೇ ವಿಷಯವಾಗಿ ಮೀಸಲಾತಿ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.