ADVERTISEMENT

ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 14:53 IST
Last Updated 10 ಜನವರಿ 2020, 14:53 IST
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್   

ನವದೆಹಲಿ: ಎಬಿವಿಪಿ ಸಂಘಟನೆಗೆ ಅಪಖ್ಯಾತಿಯುಂಟು ಮಾಡುವುದಕ್ಕಾಗಿ ದುರುದ್ದೇಶದ ಪ್ರಚಾರ ನಡೆಸಲಾಗಿತ್ತು.ಆದರೆ ದೆಹಲಿ ಪೊಲೀಸರು ಸ್ಪಷ್ಟ ಚಿತ್ರಣವನ್ನು ಬಿಚ್ಚಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಜನವರಿ 5ರಂದು ಸಂಜೆ ದೆಹಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದೊಳಗೆ ನುಗ್ಗಿ ಮುಸುಕುಧಾರಿಗಳು ದಾಂದಲೆ ನಡೆಸಿದ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ 9 ಮಂದಿ ಶಂಕಿತ ಆರೋಪಿಗಳ ಚಿತ್ರವನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. ಇದರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ಎಐಎಸ್‌ಎ ಸಂಘಟನೆಯ ಏಳು ಮಂದಿ ಮತ್ತು ಎಬಿವಿಪಿ ಸಂಘಟನೆಯ ಇಬ್ಬರ ಚಿತ್ರಗಳಿವೆ.

ಕಳೆದ 5 ದಿನಗಳಿಂದ ಎಬಿವಿಪಿ, ಬಿಜೆಪಿ ಮತ್ತು ಇತರರನ್ನು ದೂರಲಾಗುತ್ತಿತ್ತು. ಅದು ಸರಿಯಲ್ಲ ಎಂಬುದನ್ನು ಪೊಲೀಸರು ತೋರಿಸಿದ್ದಾರೆ. ಜೆಎನ್‌ಯುನಲ್ಲಿ ಸಿಸಿಟಿವಿ ಹಾಳುಗೆಡಹಿ, ಸರ್ವರ್‌ನ್ನು ನಾಶ ಮಾಡಿ ಪೂರ್ವಯೋಜಿತ ಕೃತ್ಯವೆಸಗಿದ್ದು ಎಡಪಂಥೀಯ ಸಂಘಟನೆಗಳು ಎಂದು ಕೇಂದ್ರ ಸಚಿವರು ಪ್ರತಿಕ್ರಿಯಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಜೆಎನ್‌ಯು ವಿದ್ಯಾರ್ಥಿಗಳು ಹೋರಾಟವನ್ನು ನಿಲ್ಲಿಸಿ ತರಗತಿ ನಡೆಸಲು ಬಿಡಬೇಕು. ತನಿಖೆಗೆ ಸಹಕರಿಸಬೇಕು. ಸಿಪಿಎಂ, ಸಿಪಿಐ, ಎಎಪಿ ಮೊದಲಾದ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ಜನರು ತಿರಸ್ಕರಿಸಿದ್ದಾರೆ. ಹಾಗಾಗಿ ಈ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ವಿದ್ಯಾರ್ಥಿಗಳನ್ನು ಬಳಸುತ್ತಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.

ಜೆಎನ್‌ಯುನಲ್ಲಿ ಎಡಪಕ್ಷಗಳ ಮುಖವಾಡ ಕಳಚಿದೆ. ಅವರು ಅಲ್ಲಿ ದಾಂದಲೆ ನಡೆಸಿದರು. ತೆರಿಗೆದಾರರ ಹಣ ಬಳಸಿರುವ ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿದರು. ನೂತನ ವಿದ್ಯಾರ್ಥಿಗಳ ದಾಖಲಾತಿಗೆ ಅಡ್ಡಿಪಡಿಸಿದರು. ಅವರು ಕ್ಯಾಂಪಸ್‌ನ್ನು ರಾಜಕೀಯ ಸಮರಭೂಮಿಯನ್ನಾಗಿ ಮಾಡಿಕೊಂಡರು. ಜೆಎನ್‌ಯು ಹಿಂಸಾಚಾರದಲ್ಲಿ ಎಡಪಕ್ಷಗಳ ಕೈವಾಡ ಇದೆ ಎಂಬುದು ದೆಹಲಿ ಪೊಲೀಸರು ಸಾಕ್ಷ್ಯ ಬಿಡುಗಡೆ ಮಾಡಿದ್ದರಿಂದ ಎಲ್ಲರಿಗೂ ಗೊತ್ತಾಗಿದೆಎಂದು ಸ್ಮೃತಿ ಇರಾನಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.