ಪಠಾಣ್ಕೋಟ್: ತಾಲಿಬಾನ್ಗೆ ಹೋಲಿಸಿ ಆರ್ಎಸ್ಎಸ್ –ಬಿಜೆಪಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು.
ಪಕ್ಷವು ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ’ ಯಾತ್ರೆ ವೇಳೆ ಮಾತನಾಡಿದ ಅವರು, ‘ಹಿಂದುತ್ವ ಬ್ರಿಗೇಡ್ ಸಂವಿಧಾನ ಗೌರವಿಸುವುದಿಲ್ಲ. ಆದರೆ, ಅವರಿಗೆ ‘ಮನುಸ್ಮ್ರತಿ’ ಮೇಲೆ ಮಾತ್ರ ಗೌರವ. ಅಫ್ಗಾನಿಸ್ತಾನದಲ್ಲಿ ಇಸ್ಲಾಮಿಸ್ಟ್ಗಳು ನಡೆದುಕೊಳ್ಳುತ್ತಿರುವ ರೀತಿಯನ್ನೇ ಭಾರತದಲ್ಲಿ ಅನುಸರಿಸಲು ಆರ್ಎಸ್ಎಸ್ –ಬಿಜೆಪಿ ಪ್ರಯತ್ನಿಸುತ್ತಿವೆ’ ಎಂದು ಆರೋಪಿಸಿದರು.
‘ಸಮಾಜ ವಿಭಜಿಸಲು ಬಿಜೆಪಿ ನೇತೃತ್ವದ ಸರ್ಕಾರ, ಆರ್ಎಸ್ಎಸ್ ಮತ್ತು ಬಿಜೆಪಿ ಪಕ್ಷದ ನಾಯಕರು, ಕಾರ್ಯಕರ್ತರು ಮಾಡಿದ ಪ್ರಯತ್ನಗಳ ಫಲವೇ ‘ಭಾರತ್ ಜೋಡೊ’ ಯಾತ್ರೆ. ಅದಕ್ಕಾಗಿಯೇ ಈ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿ, ಸರ್ಕಾರದ ವೈಫಲ್ಯಗಳು, ಅದರಲ್ಲೂ ವಿಶೇಷವಾಗಿ ಹಣದುಬ್ಬರ, ನಿರುದ್ಯೋಗ ಸಮಸ್ಯೆಯನ್ನು ಜನತೆಗೆ ಮನದಟ್ಟು ಮಾಡಿಸಲು ರಾಹುಲ್ ಗಾಂಧಿ ನಿರ್ಧರಿಸಿದರು. ಯಾತ್ರೆಗೆ ಎಲ್ಲ ವರ್ಗ, ಎಲ್ಲ ವೃತ್ತಿ, ಎಲ್ಲ ವಯೋಮಾನದ ಜನರ ಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆಗೆ ಎಲ್ಲ ಸಮುದಾಯದ ಒಡನಾಟ ಲಭಿಸುತ್ತಿರುವುದು ಒಂದು ಬಹುದೊಡ್ಡ ಯಶಸ್ಸು’ ಎಂದರು.
‘ಬಿಜೆಪಿಗೆ ಜನರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚಿಂತೆ ಇಲ್ಲ. ಅದು ಚುನಾವಣೆಗಳನ್ನು ಗೆಲ್ಲಲು, ಯಾವುದೇ ಪಕ್ಷ ಗೆದ್ದರೂ ತಮ್ಮದೇ ಪಕ್ಷದ ಸರ್ಕಾರ ಸ್ಥಾಪಿಸಲು ಮಾತ್ರ ತಂತ್ರ ಮಾಡುತ್ತದೆ. ಶಾಸಕರ ಮೇಲೆ ಒತ್ತಡ ಹೇರಿ, ರಾಜೀನಾಮೆ ಕೊಡಿಸಿ ಕರ್ನಾಟಕ, ಮಧ್ಯಪ್ರದೇಶ ಸೇರಿ ಆರು ರಾಜ್ಯಗಳಲ್ಲಿ ವಾಮಮಾರ್ಗದಲ್ಲಿ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಿದರು. ಬಿಜೆಪಿಯನ್ನು ಚುನಾವಣೆಗಳ ‘ಚೋರರು’ ಅಥವಾ ‘ಡಕಾಯಿತರು’ ಎನ್ನಬೇಕೊ ತಿಳಿಯದು’ ಎಂದು ತೀವ್ರ ವಾಗ್ದಾಳಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.