ADVERTISEMENT

ಜೂನ್ 1ರಿಂ‌ದ ಲಾಕ್‌ಡೌನ್ 5.0: ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರಕ್ಕೆ ವಿನಾಯಿತಿ?

ಏಜೆನ್ಸೀಸ್
Published 30 ಮೇ 2020, 7:37 IST
Last Updated 30 ಮೇ 2020, 7:37 IST
ಲಾಕ್‌ಡೌನ್‌ ಅವಧಿಯಲ್ಲಿ ಪಾರ್ಸೆಲ್‌ ಸೇವೆ ನೀಡುತ್ತಿದ್ದ ಬೆಂಗಳೂರಿನ ಹೋಟೆಲ್‌ವೊಂದರ ಚಿತ್ರ
ಲಾಕ್‌ಡೌನ್‌ ಅವಧಿಯಲ್ಲಿ ಪಾರ್ಸೆಲ್‌ ಸೇವೆ ನೀಡುತ್ತಿದ್ದ ಬೆಂಗಳೂರಿನ ಹೋಟೆಲ್‌ವೊಂದರ ಚಿತ್ರ    

ನವದೆಹಲಿ: ಜೂನ್ 1ರಿಂದ ಐದನೇ ಹಂತದ ಲಾಕ್‌ಡೌನ್ ಜಾರಿಗೆ ಬಂದಲ್ಲಿ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದ ಚಟುವಟಿಕೆಗಳಿಗೆ ವಿನಾಯಿತಿ ನೀಡುವ ಬಗ್ಗೆ ರಾಜ್ಯ ಸರ್ಕಾರಗಳು ನೀಡಿರುವ ಸಲಹೆಯನ್ನು ಕೇಂದ್ರ ಪರಿಗಣಿಸುವ ಸಾಧ್ಯತೆ ಇದೆ. ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಪುದುಚೇರಿ, ಕೇರಳ, ಗೋವಾ, ಮತ್ತು ಈಶಾನ್ಯ ರಾಜ್ಯಗಳ ಆರ್ಥಿಕತೆಯು ಬಹುತೇಕ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನು ಅವಲಂಬಿಸಿದೆ. ಈ ಲಾಕ್‌ಡೌನ್‌ನಿಂದ ಕ್ಷೇತ್ರಗಳಿಗೆ ಇನ್ನೂ ವಿನಾಯಿತಿ ದೊರೆತಿಲ್ಲ.

ಹೋಟೆಲ್, ರೆಸ್ಟೋರೆಂಟ್, ಬೀಚ್ ಇತ್ಯಾದಿಗಳಲ್ಲಿ ಚಟುವಟಿಕೆಗಳಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಐದನೇ ಹಂತದ ಲಾಕ್‌ಡೌನ್ ವೇಳೆ ಕೇಂದ್ರ ಸರ್ಕಾರ ಈಡೇರಿಸುವ ಸಾಧ್ಯತೆ ಇದೆ. ಇದರಿಂದ ಈ ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಗೊಳ್ಳಲಿದೆ. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವನ್ನೇ ಅವಲಂಬಿಸಿರುವ ರಾಜ್ಯಗಳು ಇನ್ನೂ ಸಂಕಷ್ಟ ಅನುಭವಿಸುತ್ತಿವೆ. ಹೀಗಾಗಿ ಮುಂದಿನ ಹಂತದಲ್ಲಿ ಇನ್ನಷ್ಟು ವಿನಾಯಿತಿ ನೀಡುವ ನಿರೀಕ್ಷೆ ಇದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಅಂತರ ಕಾಯ್ದುಕೊಳ್ಳುವುದು, ಮಿತಿ ಹೇರುವ ಮೂಲಕ ಹೋಟೆಲ್, ರೆಸ್ಟೋರೆಂಟ್, ಪ್ರವಾಸೋದ್ಯಮ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ಈಗಾಗಲೇ ಮನವಿ ಮಾಡಿವೆ. ಹೋಟೆಲ್, ಪ್ರವಾಸಿ ಕ್ಷೇತ್ರಗಳಲ್ಲಿ ಕನಿಷ್ಠ ಆಸನಗಳು, ಗ್ರಾಹಕರ ಆರೋಗ್ಯ ತಪಾಸಣೆ, ಅರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವ ಮೂಲಕ ಚಟುವಟಿಕೆಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ಸಲಹೆ ನೀಡಿವೆ. ಹೀಗೆ ಮಾಡುವ ಮೂಲಕ ಆದಾಯ ಸಂಗ್ರಹ ಆರಂಭಿಸಬಹುದು ಎಂದು ಅವು ಕೇಂದ್ರಕ್ಕೆ ತಿಳಿಸಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

5ನೇ ಹಂತದ ಲಾಕ್‌ಡೌನ್‌ನಲ್ಲಿ ಇನ್ನಷ್ಟು ಚಟುವಟಿಕೆಗಳಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.