ADVERTISEMENT

ಹಳ್ಳಿಗೆ ಮರಳಿದ ವಲಸೆ ಕಾರ್ಮಿಕನಿಗೆ ಏನೂ ಸಿಗುವುದಿಲ್ಲ: ಪಿ.ಚಿದಂಬರಂ ಕಳವಳ

​ಪ್ರಜಾವಾಣಿ ವಾರ್ತೆ
Published 14 ಮೇ 2020, 8:00 IST
Last Updated 14 ಮೇ 2020, 8:00 IST
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ
ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ   

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರಗಳಿಂದ ತಮ್ಮ ತವರಿಗೆ ಮರಳಿರುವ ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

'ಲಾಕ್‌ಡೌನ್‌ನಿಂದ ಬಾಧಿತರಾಗಿರುವ ವಲಸೆ ಕಾರ್ಮಿಕರಿಗೆ ಪಿಎಂ-ಕೇರ್ಸ್‌ನಿಂದ ₹1,000 ಕೋಟಿ ಘೋಷಿಸಲಾಗಿದೆ. ಆದರೆ, ಈ ಹಣವನ್ನು ವಲಸೆ ಕಾರ್ಮಿಕರಿಗೆ ನೇರವಾಗಿ ನೀಡಲಾಗುವುದಿಲ್ಲ. ವಲಸೆ ಕಾರ್ಮಿಕರ ಪ್ರಯಾಣ, ವಸತಿ, ಔಷಧಿ ಮತ್ತು ಆಹಾರದ ವೆಚ್ಚಗಳನ್ನು ಪೂರೈಸಲು ರಾಜ್ಯ ಸರ್ಕಾರಗಳಿಗೆ ಈ ದುಡ್ಡನ್ನು ನೀಡಲಾಗುತ್ತದೆ. ವಲಸೆ ಕಾರ್ಮಿಕರ ಕೈಗೆ ಏನೂ ತಲುಪುವುದಿಲ್ಲ. ದಯಮಾಡಿ ಇಂತಹ ಸಣ್ಣತಪ್ಪನ್ನು ಮಾಡಬೇಡಿ' ಎಂದು ಕೇಂದ್ರ ಸರ್ಕಾರಕ್ಕೆ ಪಿ.ಚಿದಂಬರಂ ಹೇಳಿದ್ದಾರೆ.

ಹಳ್ಳಿಗೆ ಮರಳಿರುವ ಕಾರ್ಮಿಕ ತನ್ನ ಕುಟುಂಬವನ್ನು ಹೇಗೆ ಪೊರೆಯುತ್ತಾನೆ ಎಂದು ಆತಂಕ ವ್ಯಕ್ತಪಡಿಸಿರುವ ಚಿದಂಬರಂ, 'ಎಲ್ಲಾ ಅಡೆತಡೆಗಳನ್ನು ಮೀರಿ ವಲಸೆ ಕಾರ್ಮಿಕ ತನ್ನ ಹಳ್ಳಿಗೆ ಮರಳಿದ್ದಾನೆ. ಅವನಿಗೆ ತನ್ನ ಹಳ್ಳಿಯಲ್ಲಿ ಉದ್ಯೋಗಗಳಿಲ್ಲ. ಕೆಲಸ ಮತ್ತು ಆದಾಯವಿಲ್ಲ. ಅವನು ಹೇಗೆ ಬದುಕುತ್ತಾನೆ ಮತ್ತು ತನ್ನ ಕುಟುಂಬವನ್ನು ಹೇಗೆ ಪೊರೆಯುತ್ತಾನೆ?' ಎಂದು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.