ADVERTISEMENT

ಲಾಕ್‌ಡೌನ್‌ ಉದ್ದೇಶ ಈಡೇರಿದೆ: ಬಿಜೆಪಿ

ರಾಹುಲ್‌ ಹೇಳಿಕೆಯಲ್ಲಿ ಹುರುಳಿಲ್ಲ: ಜಾವಡೇಕರ್

ಪಿಟಿಐ
Published 26 ಮೇ 2020, 20:15 IST
Last Updated 26 ಮೇ 2020, 20:15 IST
   

ನವದೆಹಲಿ: ‘ಕೊರೊನಾ ವೈರಸ್‌ ಸೋಂಕು ಪ್ರಸರಣ ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ ವಿಫಲವಾಗಿದೆ‘ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಯನ್ನು ತಿರಸ್ಕರಿಸಿರುವ ಬಿಜೆಪಿ, ಲಾಕ್‌ಡೌನ್‌ ಯಶಸ್ವಿಯಾಗಿದೆ ಎಂದು ಸಮರ್ಥಿಸಿಕೊಂಡಿದೆ.

‘ಲಾಕ್‌ಡೌನ್‌ ಜಾರಿ ಮಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿರ್ಧಾರದಿಂದ ಕೊರೊನಾ ವೈರಸ್‌ ಸೋಂಕು ಪ್ರಸರಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿದೆ. ಅಮೆರಿಕ, ಫ್ರಾನ್ಸ್‌ ಹಾಗೂ ಸ್ಪೇನ್‌ಗಳಿಗಿಂತಲೂ ಭಾರತದಲ್ಲಿ ಸಾವು–ನೋವು ಕಡಿಮೆಯಾಗಲು ಇದರಿಂದ ಸಾಧ್ಯವಾಗಿದೆ‘ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಹೇಳಿದ್ದಾರೆ.

‘ಕೋವಿಡ್‌–19 ವಿರುದ್ಧ ಭಾರತ ಕೈಗೊಂಡಿರುವ ಹೋರಾಟಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಇಂತಹ ಪಿಡುಗಿನ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಕಾಂಗ್ರೆಸ್‌ ಮಾತ್ರ ಕೀಳು ರಾಜಕಾರಣ ಮಾಡುತ್ತಿದೆ‘ ಎಂದು ಟೀಕಿಸಿದ್ದಾರೆ.

ADVERTISEMENT

’ಲಾಕ್‌ಡೌನ್‌ ಜಾರಿಗೂ ಮುನ್ನ ಕೋವಿಡ್‌ ಪ್ರಕರಣಗಳು ದ್ವಿಗುಣಗೊಳ್ಳುವ ಅವಧಿ ಮೂರು ದಿನ ಇತ್ತು. ಈಗ ಈ ಅವಧಿ 13 ದಿನವಾಗಿದೆ. ಇದು ಭಾರತದ ಯಶಸ್ಸು‘ ಎಂದಿದ್ದಾರೆ.

‘ಈ ಮೊದಲು ಲಾಕ್‌ಡೌನ್‌ ಹೇರಿದ್ದು ಯಾಕೆ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್‌, ಈಗ ತೆರವುಗೊಳಿಸುತ್ತಿರುವುದನ್ನು ಪ್ರಶ್ನಿಸುತ್ತಿದೆ. ಇದು ಕಾಂಗ್ರೆಸ್‌ನ ಇಬ್ಬಗೆ ನೀತಿ ಹಾಗೂ ಆಷಾಢಭೂತಿತನವನ್ನು ತೋರುತ್ತದೆ‘ ಎಂದೂ ಜಾವಡೇಕರ್‌ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.