ಲೋಕಸಭೆಯಲ್ಲಿ ತಡರಾತ್ರಿವರೆಗೂ ನಡೆದ ವಿಬಿ–ಜಿ ರಾಮ್ ಜಿ ಮಸೂದೆ ಮೇಲಿನ ಚರ್ಚೆ
ನವದೆಹಲಿ: ಲೋಕಸಭೆಯಲ್ಲಿ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ, 2025’ ಮೇಲಿನ ಚರ್ಚೆ ಗುರುವಾರ ತಡರಾತ್ರಿವರೆಗೂ ನಡೆಯಿತು.
ಸುಮಾರು 14 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ 98 ಸದಸ್ಯರು ಭಾಗಿಯಾಗಿದ್ದರು. ಕಲಾಪ ತಡರಾತ್ರಿ 1.35ರವರೆಗೂ ಮುಂದುವರಿದ ಕಾರಣ, ಗುರುವಾರಕ್ಕೆ ಮುಂದೂಡಿಕೆಯಾಯಿತು.. ಚರ್ಚೆಗೆ ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಉತ್ತರಿಸಲಿದ್ದಾರೆ.
ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಪಕ್ಷಗಳ ಗದ್ದಲದ ನಡುವೆಯೂ ಮಸೂದೆಯನ್ನು ಮಂಗಳವಾರ ಮಂಡಿಸಿದ್ದರು.
2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಈ ಮಸೂದೆ ನಿರ್ಣಾಯಕ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದರೂ ಪ್ರತಿಪಕ್ಷಗಳು ಪ್ರಸ್ತಾವಿತ ಶಾಸನವನ್ನು ಸ್ಥಾಯಿ ಸಮಿತಿಗೆ ಉಲ್ಲೇಖಿಸಬೇಕೆಂದು ಒತ್ತಾಯಿಸಿವೆ.
ಗುರುವಾರ ರಾಷ್ಟ್ರ ರಾಜಧಾನಿ ದೆಹಲಿ ವಾಯು ಮಾಲಿನ್ಯದ ಕುರಿತು ದೀರ್ಘಾವಧಿ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಚರ್ಚೆಯನ್ನು ಆರಂಭಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.