ADVERTISEMENT

ಲೋಕಸಭೆ ಚುನಾವಣೆ: ತೆಲಂಗಾಣದಲ್ಲಿ ಬಿಆರ್‌ಎಸ್‌–ಬಿಎಸ್‌ಪಿ ಮೈತ್ರಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 15:02 IST
Last Updated 5 ಮಾರ್ಚ್ 2024, 15:02 IST
ಕೆ. ಚಂದ್ರಶೇಖರ್ ರಾವ್‌
ಕೆ. ಚಂದ್ರಶೇಖರ್ ರಾವ್‌    

ಹೈದರಾಬಾದ್‌: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಬಿಆರ್‌ಎಸ್ ಮತ್ತು ಬಿಎಸ್‌ಪಿ ಮಂಗಳವಾರ ಘೋಷಿಸಿವೆ.

ಬಿಆರ್‌ಎಸ್‌, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಊಹೆ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ.

ತೆಲಂಗಾಣ ಬಿಎಸ್‌ಪಿ ಘಟಕದ ಅಧ್ಯಕ್ಷ ಆರ್‌.ಎಸ್‌.ಪ್ರವೀಣ್‌ ಕುಮಾರ್‌ ಅವರು ಬಿಆರ್‌ಎಸ್‌ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್‌ ಅವರನ್ನು ಭೇಟಿ ಮಾಡಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದರು. 

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಸಿಆರ್‌, ‘ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಸೀಟು ಹಂಚಿಕೆ ಕುರಿತು ಮುಂದೆ ಮಾತುಕತೆ ನಡೆಯಲಿದೆ. ದಲಿತರು ಮತ್ತು ದುರ್ಬಲ ವರ್ಗದವರಿಗೆ ಯೋಜನೆ ಜಾರಿ ಸೇರಿದಂತೆ ಹಲವು ವಿಚಾರಗಳಲ್ಲಿ ಎರಡೂ ಪಕ್ಷಗಳ ಮಧ್ಯೆ ಹಲವು ಸಾಮಾನ್ಯ ಸಂಗತಿಗಳಿವೆ’ ಎಂದು ಹೇಳಿದರು.

ಪ್ರವೀಣ್‌ ಕುಮಾರ್, ‘ತೆಲಂಗಾಣದಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಜಾತ್ಯತೀತ ನಿಲುವು ಹೊಂದಿದ ಪಕ್ಷಗಳು ಒಂದಾಗಬೇಕಾದ ಅಗತ್ಯವಿದೆ. ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯಾಗಿ ಪರಿಣಮಿಸಿದೆ. ಕಾಂಗ್ರೆಸ್‌ ಸಹ ಬಿಜೆಪಿಯಂತೆಯೇ ಆಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.