
ಓಂ ಬಿರ್ಲಾ
ನವದೆಹಲಿ: ತಮ್ಮನ್ನು ಪದಚ್ಯುತಗೊಳಿಸುವ ಸಂಬಂಧ ವಿರೋಧ ಪಕ್ಷಗಳು ಸಲ್ಲಿಸಿರುವ ನೋಟಿಸ್ನಲ್ಲಿದ್ದ ದೋಷಗಳನ್ನು ಸ್ವತಃ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೇ ಗುರುತಿಸಿದ್ದರು. ದೋಷಗಳನ್ನು ಉಲ್ಲೇಖಿಸಿ ಅವರು ನೋಟಿಸ್ಅನ್ನು ತಿರಸ್ಕರಿಸಬಹುದಿತ್ತು. ಆದರೆ, ದೋಷಗಳನ್ನು ನಿವಾರಿಸಿ ನೋಟಿಸ್ಅನ್ನು ಸದನದಲ್ಲಿ ಮಂಡಿಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲೋಕಸಭೆಯಲ್ಲಿ ನಡೆದ ಘಟನೆಗಳ ಕುರಿತು ನೋಟಿಸ್ನಲ್ಲಿ ವಿವರಿಸುವಾಗ, ‘ಫೆಬ್ರುವರಿ 2025ರಂದು ನಡೆದ ಘಟನೆಗಳು’ ಎಂಬುದಾಗಿ ನಾಲ್ಕು ಸಲ ಉಲ್ಲೇಖಿಸಲಾಗಿತ್ತು. ಇದೇ ಆಧಾರದಲ್ಲಿ ಬಿರ್ಲಾ ಅವರು ನೋಟಿಸ್ ತಿರಸ್ಕರಿಸಬಹುದಿತ್ತು ಎಂದು ಮೂಲಗಳು ಹೇಳಿವೆ.
‘ವಿಪಕ್ಷಗಳು ತಮ್ಮ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಕುರಿತು ಇತ್ಯರ್ಥವಾಗುವವರೆಗೆ ಸ್ಪೀಕರ್ ಸ್ಥಾನದಲ್ಲಿ ಆಸೀನರಾಗದಿರಲು ನಿರ್ಧರಿಸುವ ಮೂಲಕ ಅವರು ನೈತಿಕತೆ ಎತ್ತಿ ಹಿಡಿದಿದ್ದಾರೆ’ ಎಂದು ಲೋಕಸಭಾ ಸಚಿವಾಲಯ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 9ರಂದು ಈ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆ ನಡೆಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪನಾಯಕ ಗೌರವ್ ಗೊಗೋಯಿ ನೇತೃತ್ವದ ನಿಯೋಗವು ಸಂವಿಧಾನದ 94(ಸಿ) ವಿಧಿಯಡಿ, ಸ್ಪೀಕರ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕುರಿತ ನೋಟಿಸ್ಅನ್ನು ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರಿಗೆ ಮಂಗಳವಾರ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.