ಉತ್ತರ ಪ್ರದೇಶ ಪಂಚಾಯತ್ ರಾಜ್ ಸಚಿವ ಓಂ ಪ್ರಕಾಶ್ ರಾಜಭರ್
ಚಿತ್ರಕೃಪೆ: PTI and WikiCommons
ಬಲ್ಲಿಯಾ (ಉತ್ತರ ಪ್ರದೇಶ): ಶ್ರೀರಾಮನ ಪರಮ ಭಕ್ತ ಹನುಮಂತ ಹುಟ್ಟಿದ್ದು ರಾಜಭರ್ ಜಾತಿಯಲ್ಲಿ ಎಂದು ರಾಜ್ಯದ ಪಂಚಾಯತ್ ರಾಜ್ ಸಚಿವ ಓಂ ಪ್ರಕಾಶ್ ರಾಜಭರ್ ಅವರು ಶನಿವಾರ ಹೇಳಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷ ಸುಹೇಲ್ದೇವ್ ಭಾರತೀಯ ಸಮಾಜ್ ಪಾರ್ಟಿ (ಎಬಿಎಸ್ಪಿ) ಮುಖ್ಯಸ್ಥರಾಗಿರುವ ಓಂ ಪ್ರಕಾಶ್, ಜಿಲ್ಲೆಯ ವಾಸುದೇವ ಗ್ರಾಮದ ಮುಖ್ಯದ್ವಾರದ ಬಳಿ ಸುಹೇಲ್ದೇವ್ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ.
'ಹುನಮಂತ ರಾಜಭರ್ ಜಾತಿಯಲ್ಲಿ ಹುಟ್ಟಿದ್ದರು. ರಾಕ್ಷಸ ಅಹಿರಾವಣ್, ರಾಮ ಮತ್ತು ಲಕ್ಷ್ಮಣರನ್ನು ಪತಾಳಪುರಿಗೆ ಹೊತ್ತೊಯ್ದ ಸಂದರ್ಭದಲ್ಲಿ, ಅವರನ್ನು ವಾಪಸ್ ಕರೆತರುವ ಧೈರ್ಯವನ್ನು ಯಾರೂ ಮಾಡಿರಲಿಲ್ಲ. ರಾಜಭರ್ ಜಾತಿಯಲ್ಲಿ ಹುಟ್ಟಿದ್ದ ಹನುಮಂತ ಮಾತ್ರವೇ ಅಂತಹ ಧೈರ್ಯ ತೋರಿದ್ದರು' ಎಂದು ಹೇಳಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್ಪಿ) ಪ್ರತಿಭಟನೆ ನಡೆಸುತ್ತಿರುವ ಬಗ್ಗೆಯೂ ಸಚಿವ ಕಿಡಿಕಾರಿದ್ದಾರೆ.
'ಅಂಬೇಡ್ಕರ್ ಹೆಸರು 2012ಕ್ಕೂ ಮುನ್ನ ಸಮಾಜವಾದಿ ಪಕ್ಷದವರನ್ನು ಸಾಕಷ್ಟು ಕೆರಳಿಸಿತ್ತು. ಅಧಿಕಾರಕ್ಕೇರಿದ ಮರುದಿನವೇ ಲಖನೌನಲ್ಲಿರುವ ಅಂಬೇಡ್ಕರ್ ಉದ್ಯಾನವನ್ನು ನೆಲಸಮಗೊಳಿಸುವುದಾಗಿ ಮತ್ತು ಶೌಚಾಲಯಗಳನ್ನು ನಿರ್ಮಿಸುವುದಾಗಿ ಆ ಪಕ್ಷ ಘೋಷಿಸಿತ್ತು' ಎಂದು ಆರೋಪಿಸಿದ್ದಾರೆ.
'ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್, ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಲಕ್ಷಾಂತರ ಜನರನ್ನು, ಪತ್ರಕರ್ತರನ್ನು ಜೈಲಿಗಟ್ಟಿತ್ತು. ಇಂದು ಅಂಬೇಡ್ಕರ್ ಅವರ ಬಗ್ಗೆ ಭಾರಿ ಪ್ರೀತಿ ತೋರುತ್ತಿದೆ. ಈ ಹಿಂದೆ ಅವರು ದೇವರಾಗಿರಲಿಲ್ಲವೇ' ಎಂದು ಕೇಳಿದ್ದಾರೆ.
ಅಂಬೇಡ್ಕರ್ ಹೆಸರಿನಲ್ಲಿ ಜಾರಿಯಾಗಿದ್ದ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊನೆಗಾಣಿಸುವ ಮೂಲಕ, ಲಕ್ಷಾಂತರ ಬದುಕನ್ನು ಎಸ್ಪಿ ಹಾಳುಮಾಡಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.