ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕಮಲ್ನಾಥ್ ಅವರಿಗೆ ವಿಶ್ವಾಸಮತ ಯಾಚಿಸಲು ಸೋಮವಾರ ಅವಕಾಶ ನೀಡುವಂತೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿಗೆ ನಿರ್ದೇಶಿಸಿದ್ದಾರೆ.
ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ‘ಮಧ್ಯಪ್ರದೇಶದ ವಿಧಾನಸಭೆ ಅಧಿವೇಶನವು ಮಾರ್ಚ್ 16ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ನಾನು ವಿಧಾನಸಭೆ ಉದ್ದೇಶಿಸಿ ಮಾತನಾಡಿದ ನಂತರ, ವಿಶ್ವಾಸಮತ ಯಾಚನೆಗೆ ಸ್ವೀಕರ್ ಅವಕಾಶ ನೀಡಲಿದ್ದಾರೆ’ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
‘ಗುಂಡಿಯನ್ನು ಒತ್ತುವ ಮೂಲಕ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ಬೇರೆ ಯಾವುದೇ ಮತದಾನ ವಿಧಾನ ಸ್ವೀಕಾರಾರ್ಹವಾಗುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ನನ್ನ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಹೊಂದಿದೆ. ಇದನ್ನು ಸಾಬೀತುಪಡಿಸಲು ಸಿದ್ಧ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾಥ್ ಶುಕ್ರವಾರ ಹೇಳಿದ್ದರು.
ಕಮಲ್ನಾಥ್ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಆರು ಮಂದಿ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪೀಕರ್ ಎನ್.ಪಿ. ಪ್ರಜಾಪತಿ ಶನಿವಾರ ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.