ADVERTISEMENT

ಮಾಹಿತಿ ಸ್ವೀಕರಿಸಲು ಎತ್ತಿನ ಬಂಡಿ ಏರಿ ಬಂದ ಆರ್‌ಟಿಐ ಕಾರ್ಯಕರ್ತ!

ಪಿಟಿಐ
Published 5 ನವೆಂಬರ್ 2022, 13:00 IST
Last Updated 5 ನವೆಂಬರ್ 2022, 13:00 IST
.
.   

ಶಿವಪುರಿ (ಮಧ್ಯಪ್ರದೇಶ): ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ತಾವು ಕೇಳಿದ್ದ ಮಾಹಿತಿಯ 9,000 ಪುಟಗಳ ದಾಖಲೆಗಳನ್ನು ಪಡೆಯಲು ಎತ್ತಿನ ಬಂಡಿ ಏರಿ, ಡೋಲು ಬಾರಿಸಿಕೊಂಡು ಪುರಸಭೆಗೆ ಬಂದ ಪ್ರಸಂಗ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬೈರದ್‌ನಲ್ಲಿ ಶುಕ್ರವಾರ ನಡೆದಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಧಕಡ್, ‘ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಕುರಿತು ಮಾಹಿತಿ ಕೇಳಿದ್ದೆ. ಇದನ್ನು ಪಡೆಯಲು ₹25,000 ಪಾವತಿಸಬೇಕೆಂದು ಹೇಳಿದ್ದರು. ಅದರಂತೆ ಪರಿಚಯಸ್ಥರಿಂದ ಸಾಲ ಮಾಡಿ ಹಣವನ್ನೂ ನೀಡಿದ್ದೆ. ಆದಾಗ್ಯೂ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಈ ಕುರಿತು ಗ್ವಾಲಿಯರ್ ನಗರಾಡಳಿತ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದೆ. ಅವರು ಮಾಹಿತಿ ಒದಗಿಸುವಂತೆ ಆದೇಶ ನೀಡಿದರು. ಎರಡು ತಿಂಗಳ ಕಾಲ ಓಡಾಡಿದ ನಂತರ ಮಾಹಿತಿ ದಾಖಲೆಗಳನ್ನು ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಕೊನೆಗೂ ಮಾಹಿತಿ ಲಭ್ಯವಾದ ಸಂಭ್ರಮದಲ್ಲಿ ಡೋಲು ಬಡಿದುಕೊಂಡು, ಎತ್ತಿನ ಬಂಡಿ ಏರಿ ಬಂದೆ’ ಎಂದರು.

‘ಧಕಡ್‌ ಅವರು ಪೂರ್ಣ ಶುಲ್ಕ ಪಾವತಿಸಿದ ನಂತರ ಪುರಸಭೆ ಮಾಹಿತಿ ಒದಗಿಸಿದೆ. ಇದಕ್ಕಾಗಿ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇವರು ಕೇಳಿದ್ದ ಮಾಹಿತಿಯನ್ನು ಸಂಗ್ರಹಿಸಲು ಐದು ದಿನ ಬೇಕಾಯಿತು’ ಎಂದು ಬೈರದ್ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.