ADVERTISEMENT

ವಿಮಾನ ದುರಂತ| ಸರ್ಕಾರಿ ಗೌರವಗಳೊಂದಿಗೆ ದೀಪಕ್ ಸಾಠೆ ಅಂತ್ಯಕ್ರಿಯೆಗೆ ನಿರ್ಧಾರ

ಇಂದು ಮಧ್ಯಾಹ್ನ ಅಂತ್ಯಕ್ರಿಯೆ, ಮಹಾರಾಷ್ಟ್ರ ಸರ್ಕಾರ ತೀರ್ಮಾನ

ಪಿಟಿಐ
Published 11 ಆಗಸ್ಟ್ 2020, 5:54 IST
Last Updated 11 ಆಗಸ್ಟ್ 2020, 5:54 IST
ಕೊಯಿಕ್ಕೋಡ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ದೀಪಕ್ ಸಾಠೆ ಅವರ ಪಾರ್ಥಿವ ಶರೀರ  ಭಾನುವಾರ ಮುಂಬೈ ತಲುಪಿದಾಗಿನ ಕ್ಷಣ.
ಕೊಯಿಕ್ಕೋಡ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಕ್ಯಾಪ್ಟನ್ ದೀಪಕ್ ಸಾಠೆ ಅವರ ಪಾರ್ಥಿವ ಶರೀರ  ಭಾನುವಾರ ಮುಂಬೈ ತಲುಪಿದಾಗಿನ ಕ್ಷಣ.   

ಮುಂಬೈ: ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್‌ 7 ರಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಪೈಲಟ್‌ ಕ್ಯಾಪ್ಟನ್‌ ದೀಪಕ್ ಸಾಠೆ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದೊಂದಿಗೆ ನಡೆಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

‘ಕ್ಯಾಪ್ಟನ್ ದೀಪಕ್ ಸಾಠೆ ಅವರ ಜೀವನ, ಕಾರ್ಯವೈಖರಿ ಈಗಿನ ಯುವ ಪೈಲಟ್‌ಗಳಿಗೆ ಸ್ಪೂರ್ತಿಯಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದೆ’ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಮುಂಬೈನ ಚಾಂಡಿವಾಲಿಯ ನಿವಾಸಿ ಕ್ಯಾಪ್ಟನ್ ಸಾಠೆ (58) ಅವರ ಅಂತ್ಯಕ್ರಿಯೆ ಇಂದು (ಮಂಗಳವಾರ) ಮಧ್ಯಾಹ್ನ ನಡೆಯಲಿದೆ.

ವಿಮಾನ ಅಪಘಾತ ಸಂಭವಿಸಿದ ನಂತರದಲ್ಲಿ ದೀಪಕ್ ಅವರ ಪತ್ನಿ ಸುಷ್ಮಾ ಮತ್ತು ಪುತ್ರ ಕೋಯಿಕ್ಕೋಡ್‌ಗೆ ತೆರಳಿ, ದೀಪಕ್‌ ಅವರ ಪಾರ್ಥಿವ ಶರೀರವನ್ನು ಭಾನುವಾರ ಮುಂಬೈಗೆ ತಂದಿದ್ದರು. ಶವವನ್ನು ಭಾಭಾ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಮುನ್ನ ಕೆಲ ಕಾಲ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಎರಡರಲ್ಲಿ ಕೆಲ ಕಾಲ ಇರಿಸಲಾಗಿತ್ತು.

ADVERTISEMENT

ಅಪಘಾತದಲ್ಲಿ ಮೃತಪಟ್ಟ ಸಹ ಪೈಲಟ್ ಅಖಿಲೇಶ್ ಕುಮಾರ್ ಅಂತ್ಯಕ್ರಿಯೆ ಅವರ ತವರು ಮಥುರಾದಲ್ಲಿ ಭಾನುವಾರ ಅವರ ಕುಟುಂಬ ಸದಸ್ಯರು ಮತ್ತು ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಅಧಿಕಾರಿಗಳ ಸಮ್ಮುಖದಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.