ಅಮರಾವತಿ, ಮಹಾರಾಷ್ಟ್ರ: ಸಂಸದೆ ನವನೀತ್ ರಾಣಾ, ಅವರ ಪತಿ, ಶಾಸಕ ರವಿ ರಾಣಾ ಹಾಗೂ 15 ಬೆಂಬಲಿಗರ ವಿರುದ್ಧ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರುಮತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಮರಾವತಿ ಕಮಿಷನರ್ ಆರತಿ ಸಿಂಗ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನೆಯ ಮುಂದೆ ಗಲಭೆ ಮಾಡಿದ್ದ ಕಾರಣಕ್ಕೆ ರಾಣಾ ದಂಪತಿ ಬಂಧನಕ್ಕೊಳಗಾಗಿದ್ದರು. ಮೇ 4ರಂದು ದಂಪತಿಗೆ ಜಾಮೀನು ದೊರಕಿದ್ದು, 36 ದಿನಗಳ ನಂತರ ತಮ್ಮ ಊರಿಗೆ ಮರಳಿದಾಗ, ಅವರ ಬೆಂಬಲಿಗರು ಮೆರವಣಿಗೆ ಮೂಲಕ ರಾಣಾ ದಂಪತಿಗೆ ಭವ್ಯ ಸ್ವಾಗತ ಕೋರಿದ್ದರು.
‘ಮೆರವಣಿಗೆ ವೇಳೆ ಹಲವು ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೇ ರಾತ್ರಿ 10 ಗಂಟೆಯ ನಂತರವೂ ಧ್ವನಿ ವರ್ಧಕಗಳನ್ನು ಬಳಸಲಾಗಿತ್ತು. ಆದ್ದರಿಂದ ಐಪಿಸಿ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರಾಜಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.