ಪಣಜಿ: ‘ಮಹದಾಯಿ ವಿವಾದ ಬಗೆಹರಿಸಿದ್ದೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಯಲ್ಲಿ ನೀಡಿದ್ದ ಹೇಳಿಕೆಯನ್ನು ಅಲ್ಲಗಳೆದಿರುವ ಎಂದು ಗೋವಾ ಸಚಿವ ನಿಲೇಶ್ ಕಬ್ರಾಲ್ ‘ಅಮಿತ್ ಶಾ ಏನು ಹೇಳುತ್ತಿದ್ದಾರೋ ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಬೆಳಗಾವಿಯಲ್ಲಿ ಶನಿವಾರ ಆಯೋಜನೆಯಾಗಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಅಮಿತ್ ಶಾ, ‘ಸುದೀರ್ಘ ಕಾಲದ ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಕರ್ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಗೆಹರಿಸಿದ್ದೇವೆ. ಇದರಿಂದ ಹಲವಾರು ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿಲೇಶ್, ಈ ರೀತಿಯ ಬೆಳವಣಿಗೆಗಳು ನಡೆದಿಲ್ಲ. ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲು ನಮ್ಮ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಒಪ್ಪಿಗೆ ನೀಡುವುದಿಲ್ಲ. ರಾಜ್ಯದ ನಿಯೋಗವು ಅಮಿತ್ ಶಾ ಅವರನ್ನು ಮುಂದಿನ ಬಾರಿ ಭೇಟಿ ಆದಾಗ ಈ ಹೇಳಿಕೆ ಕುರಿತು ಅವರನ್ನು ಪ್ರಶ್ನಿಸಲಿದೆ’ ಎಂದರು.
ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಖಂಡಿತವಾಗಿಯೂ ಖಂಡಿಸುತ್ತೇನೆ. ಕೇಂದ್ರದ ಬಿಜೆಪಿ ಆಡಳಿತವು ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಗೋವಾವನ್ನು ಬೆಂಬಲಿಸದಿದ್ದರೆ, ಗೋವಾ ಕಾನೂನಾತ್ಮಕ ಹೋರಾಟ ಕೈಗೆತ್ತಿಕೊಳ್ಳಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.