ಶಿವಾಜಿ ಕಾರ್ಡಿಲೆ
ಪುಣೆ: ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ರಾಹುರಿ ಕ್ಷೇತ್ರದ ಬಿಜೆಪಿ ಶಾಸಕ ಶಿವಾಜಿ ಕಾರ್ಡಿಲೆ ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
ಅವರಿಗೆ 66 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಶಿವಾಜಿ ಅವರಿಗೆ ನಸುಕಿನಲ್ಲಿ ಹೃದಯಾಘಾತ ಸಂಭವಿಸಿತು. ತಕ್ಷಣ ಅವರನ್ನು ಅಹಿಲ್ಯಾನಗರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಶಿವಾಜಿ ಅವರು, ಕಳೆದ ಕೆಲ ಸಮಯಗಳಿಂದ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಶಿವಾಜಿ ಕಾರ್ಡಿಲೆ ಅವರು, ಆರು ಬಾರಿ ಶಾಸಕರಾಗಿದ್ದಾರೆ. ಅದರಲ್ಲೂ ಐದು ಬಾರಿ ಸತತ ಗೆಲುವು ದಾಖಲಿಸಿದ್ದಾರೆ. 2019ರಲ್ಲಿ ಎನ್ಸಿಪಿ ಅಭ್ಯರ್ಥಿ ಎದುರು ಪರಾಭವಗೊಂಡಿದ್ದರು. 2024ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸೌಧ ಪ್ರವೇಶಿಸಿದ ಶಿವಾಜಿ ಅವರು ನಂತರ ಕಾಂಗ್ರೆಸ್ನಿಂದ ಹಾಗೂ ಅವಿಭಜಿತ ಎನ್ಸಿಪಿಯಿಂದಲೂ ಸ್ಪರ್ಧಿಸಿ ಶಾಸಕರಾದವರು.
ಶಿವಾಜಿ ಅವರ ಪುತ್ರ ಅಕ್ಷಯ್ ಕಾರ್ಡಿಲೆ ಅವರು ಸದ್ಯ ಅಹಿಲ್ಯಾನಗರ ದಕ್ಷಿಣ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಶಿವಾಜಿ ಅವರ ಅಳಿಯ ಸಂಗ್ರಾಮ್ ಜಗಪತ್ ಅವರೂ ಶಾಸಕರಾಗಿದ್ದಾರೆ.
ಶಿವಾಜಿ ಕಾರ್ಡಿಲೆ ಅವರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.