ಮುಂಬೈ: ಮಹಾರಾಷ್ಟ್ರ ಸರ್ಕಾರ 6 ಕೆಮ್ಮಿನ ಸಿರಪ್ (ಕೆಮ್ಮಿನ ಔಷಧಿ) ತಯಾರಕರ ಪರವಾನಗಿಗಳನ್ನು ರದ್ದುಮಾಡಲಾಗಿದೆ ಎಂದು ಸಚಿವ ಸಂಜಯ್ ರಾಥೋಡ್ ಶನಿವಾರ ಹೇಳಿದ್ದಾರೆ.
ಇವುಗಳ ಪೈಕಿ ನಾಲ್ವರು ಪರವಾನಿಗೆದಾರರಿಗೆ ಉತ್ಪಾದನೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟು 108 ಕೆಮ್ಮಿನ ಸಿರಪ್ ತಯಾರಿಕ ಪರವಾನಿಗೆಗಳಿವೆ. ಇವುಗಳಲ್ಲಿ 84 ತಯಾರಕರ ವಿರುದ್ಧ ಸರ್ಕಾರ ತನಿಖೆ ಮಾಡುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇಲ್ಲಿ ತಯಾರಾಗಿ ಆಫ್ರಿಕಾಗೆ ರಫ್ತಾಗಿದ್ದ ಕೆಮ್ಮಿನ ಔಷಧಿ ಸೇವಿಸಿ ಗ್ಯಾಂಬಿಯಾದಲ್ಲಿ 66 ಮಕ್ಕಳು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನಿಖೆಗೆ ಸೂಚನೆ ನೀಡಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕಂಪನಿಯು ಹರಿಯಾಣದಲ್ಲಿದ್ದು, ಮಹಾರಾಷ್ಟ್ರದಲ್ಲಿ ಯಾವುದೇ ಉತ್ಪಾದನಾ ಘಟಕವನ್ನು ಹೊಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಬಹುತೇಕ ಕಂಪನಿಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳು ಹಾಗೂ ಜಿಎಂಪಿ (ಉತ್ತಮ ಉತ್ಪಾದನಾ ಪ್ರಮಾಣೀಕರಣ)ಯನ್ನು ಖಾತ್ರಿಪಡಿಸಿಕೊಂಡು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.