ಮುಂಬೈನಲ್ಲಿ ಗಣೇಶ ಹಬ್ಬಕ್ಕೆಂದು ಸಿದ್ಧಗೊಳಿಸಿದ್ದ ಮೂರ್ತಿಗಳು ಮಳೆ ನೀರಿನಲ್ಲಿ ಮುಳುಗಿರುವ ದೃಶ್ಯ.
ಪಿಟಿಐ ಚಿತ್ರ
ಮುಂಬೈ: ‘ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಮೇಘಸ್ಫೋಟದಂತಹ ಪರಿಸ್ಥಿತಿ ನಿರ್ಮಾಣಗೊಂಡು, ಪ್ರವಾಹ ಉಂಟಾಗಿದ್ದರಿಂದ 8 ಮಂದಿ ಮೃತಪಟ್ಟಿದ್ದಾರೆ. ಮುಂಬೈ ಮಹಾನಗರದಲ್ಲಿ ದಾಖಲೆ ಪ್ರಮಾಣದ 30 ಸೆಂ.ಮೀ. ಮಳೆಯಾಗಿದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
‘ಭಾರಿ ಮಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ 12 ಲಕ್ಷದಿಂದ 14 ಲಕ್ಷ ಎಕರೆ ಕೃಷಿಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಸಾವಿರಾರು ಜಾನುವಾರುಗಳು ಮೃತಪಟ್ಟಿವೆ’ ಎಂದು ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.
‘ರಾಜ್ಯದಾದ್ಯಂತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಗರದ ಜೀವನಾಡಿಯಾದ ಉಪನಗರ ರೈಲು ಸಂಚಾರ ನಿಧಾನಗತಿಯಿಂದ ಸಂಚರಿಸುತ್ತಿದ್ದು, ಕೆಲವೆಡೆ ತಡವಾಗಿ ಸಂಚರಿಸಿದವು. ಮುಂಬೈನ ಮೀಠಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 400ರಿಂದ 500 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಿಗೆ ರಜೆ: ವ್ಯಾಪಕ ಮಳೆಯಿಂದ ರಾಜ್ಯದಾದ್ಯಂತ ಮಂಗಳವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಖಾಸಗಿ ಸಂಸ್ಥೆಯ ನೌಕರರು ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಫಡಣವೀಸ್ ಸೂಚಿಸಿದ್ದಾರೆ. ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ಮಧ್ಯಾಹ್ನ 12 ಗಂಟೆಯ ನಂತರ ನ್ಯಾಯಾಲಯದಲ್ಲಿ ಕಲಾಪಗಳು ನಡೆಯಲಿಲ್ಲ.
‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾತ್ರಿ ವೇಳೆ ಭಾರಿ ಅಲೆಗಳು ದಡಕ್ಕೆ ಅಪ್ಪಳಿಸಿದ್ದು, ಸೂಕ್ಷ್ಮವಾಗಿ ಗಮನಿಸಿ ಪರಿಸ್ಥಿತಿ ನಿಯಂತ್ರಿಸಿದ್ದೇವೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದ್ದು, ನೆರೆ ರಾಜ್ಯಗಳ ಜೊತೆಗೂ ಸಂಪರ್ಕದಲ್ಲಿದ್ದೇವೆ. ಅನಿಯಂತ್ರಿತ ಜಲಾನಯನ ಪ್ರದೇಶಗಳು ಚಿಂತೆಗೀಡುಮಾಡಿದೆ’ ಎಂದು ಫಡಣವೀಸ್ ಹೇಳಿದ್ದಾರೆ.
ಮಂಗಳವಾರ ಏನೇನಾಯ್ತು..?
*ಮುಂಬೈನಲ್ಲಿ 30 ಸೆಂ.ಮೀ ಮಳೆ ದಾಖಲು
*ನಾಂದೇಡ್ ಜಿಲ್ಲೆಯಲ್ಲಿ 290 ಮಂದಿಯ ರಕ್ಷಣೆ
*ಮುಂದಿನ 48 ಗಂಟೆಗಳ ಕಾಲ ಭಾರಿ ಮಳೆಯ ನಿರೀಕ್ಷೆ
*ಉಕ್ಕಿ ಹರಿಯುತ್ತಿರುವ ಮಹಾರಾಷ್ಟ್ರದ ಪ್ರಮುಖ ನದಿಗಳು
*ಭೂಕುಸಿತ: ಕೊಲ್ಹಾಪುರ– ರತ್ನಗಿರಿ ನಡುವೆ ಹೆದ್ದಾರಿ ಬಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.