ADVERTISEMENT

‘ಮಹಾ’ ಮಳೆ | 10 ಮಂದಿ ಸಾವು: ಅಧಿಕಾರಿಗಳ ಜತೆ ಫಡಣವೀಸ್‌ ಸಭೆ

ಪಿಟಿಐ
Published 19 ಆಗಸ್ಟ್ 2025, 11:48 IST
Last Updated 19 ಆಗಸ್ಟ್ 2025, 11:48 IST
<div class="paragraphs"><p>ಮುಂಬೈನಲ್ಲಿ&nbsp;ಗಣೇಶ ಹಬ್ಬಕ್ಕೆಂದು ಸಿದ್ಧಗೊಳಿಸಿದ್ದ&nbsp;ಮೂರ್ತಿಗಳು ಮಳೆ ನೀರಿನಲ್ಲಿ&nbsp;ಮುಳುಗಿರುವ ದೃಶ್ಯ. </p></div>

ಮುಂಬೈನಲ್ಲಿ ಗಣೇಶ ಹಬ್ಬಕ್ಕೆಂದು ಸಿದ್ಧಗೊಳಿಸಿದ್ದ ಮೂರ್ತಿಗಳು ಮಳೆ ನೀರಿನಲ್ಲಿ ಮುಳುಗಿರುವ ದೃಶ್ಯ.

   

ಪಿಟಿಐ ಚಿತ್ರ 

ಮುಂಬೈ: ‘ಮಹಾರಾಷ್ಟ್ರದ ನಾಂದೇಡ್‌ ಜಿಲ್ಲೆಯಲ್ಲಿ ಮೇಘಸ್ಫೋಟದಂತಹ ಪರಿಸ್ಥಿತಿ ನಿರ್ಮಾಣಗೊಂಡು, ಪ್ರವಾಹ ಉಂಟಾಗಿದ್ದರಿಂದ 8 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ತಿಳಿಸಿದ್ದಾರೆ.

ADVERTISEMENT

‘ಮುಂಬೈ ಮಹಾನಗರದಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಮಂಗಳವಾರ ಬೆಳಿಗ್ಗೆ 8ರವರೆಗೆ ದಾಖಲೆ ಪ್ರಮಾಣದ 30 ಸೆಂ.ಮೀ. ಮಳೆಯಾಗಿದೆ’ ಎಂದರು.

‘ಮಳೆಯಿಂದಾಗಿ ಕಳೆದ ಐದು ದಿನಗಳಲ್ಲಿ ರಾಜ್ಯದಲ್ಲಿ 21 ಮಂದಿ ಮೃತಪಟ್ಟಿದ್ದಾರೆ’ ಎಂದು ರಾಜ್ಯ ತುರ್ತು ಕಾರ್ಯಾಚರಣಾ ಕೇಂದ್ರವು ತಿಳಿಸಿದೆ.

‘ಭಾರಿ ಮಳೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ 12 ಲಕ್ಷದಿಂದ 14 ಲಕ್ಷ ಎಕರೆ ಕೃಷಿಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಸಾವಿರಾರು ಜಾನುವಾರುಗಳು ಮೃತಪಟ್ಟಿವೆ’ ಎಂದು ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.

‘ರಾಜ್ಯದಾದ್ಯಂತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಗರದ ಜೀವನಾಡಿ ಯಾದ ಉಪನಗರ ರೈಲುಗಳು ನಿಧಾನಗತಿಯಿಂದ ಸಂಚರಿಸುತ್ತಿದ್ದು, ಕೆಲವೆಡೆ ತಡವಾಗಿ ಸಂಚರಿಸಿದವು. ಮುಂಬೈನ ಮೀಠಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, 400ರಿಂದ 500 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ರಜೆ:

ಮಳೆಯಿಂದ ರಾಜ್ಯದಾದ್ಯಂತ ಮಂಗಳವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಖಾಸಗಿ ಸಂಸ್ಥೆಯ ನೌಕರರು ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಫಡಣವೀಸ್‌ ಸೂಚಿಸಿದ್ದಾರೆ. ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ಮಧ್ಯಾಹ್ನ 12 ಗಂಟೆಯ ನಂತರ ನ್ಯಾಯಾಲಯದಲ್ಲಿ ಕಲಾಪಗಳು ನಡೆಯಲಿಲ್ಲ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ವಿಮಾನ ನಿಲ್ದಾಣದಿಂದ ಹಾರಬೇಕಿದ್ದ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

‘ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾತ್ರಿ ವೇಳೆ ಭಾರಿ ಅಲೆಗಳು ದಡಕ್ಕೆ ಅಪ್ಪಳಿಸಿದ್ದು, ಸೂಕ್ಷ್ಮವಾಗಿ ಗಮನಿಸಿ ಪರಿಸ್ಥಿತಿ ನಿಯಂತ್ರಿಸಿದ್ದೇವೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ ಎಫ್‌ಗೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದ್ದು, ನೆರೆ ರಾಜ್ಯಗಳ ಜೊತೆಗೂ ಸಂಪರ್ಕ ದಲ್ಲಿದ್ದೇವೆ’ ಎಂದು ಫಡಣವೀಸ್‌ ಹೇಳಿದ್ದಾರೆ.

ಮಂಗಳವಾರ ಏನೇನಾಯ್ತು..?

  • ಮುಂಬೈನಲ್ಲಿ 30 ಸೆಂ.ಮೀ ಮಳೆ ದಾಖಲು

  • ನಾಂದೇಡ್‌ ಜಿಲ್ಲೆಯಲ್ಲಿ 290 ಮಂದಿಯ ರಕ್ಷಣೆ

  • ಮುಂದಿನ 48 ಗಂಟೆ ಭಾರಿ ಮಳೆಯ ನಿರೀಕ್ಷೆ

  • ಉಕ್ಕಿ ಹರಿಯುತ್ತಿರುವ ಮಹಾರಾಷ್ಟ್ರದ ಪ್ರಮುಖ ನದಿಗಳು

  • ಭೂಕುಸಿತ: ಕೊಲ್ಹಾಪುರ– ರತ್ನಗಿರಿ ನಡುವೆ ಹೆದ್ದಾರಿ ಬಂದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.