ADVERTISEMENT

ಶಿವಸೈನಿಕರು ಹೊರಬಂದರೆ, ಬೀದಿಗಳು ಹೊತ್ತಿ ಉರಿಯುತ್ತವೆ: ಸಂಜಯ್‌ ರಾವುತ್ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2022, 12:39 IST
Last Updated 25 ಜೂನ್ 2022, 12:39 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಬಂಡಾಯ ಶಾಸಕರಿಗೆ ಬೆಂಬಲವಾಗಿ ಬಿಜೆಪಿ ನಿಂತಿದೆ ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಮಹಾರಾಷ್ಟ್ರದ ಹೊರಗಿರುವ ನೀವು(ಬಂಡಾಯ ಶಾಸಕರು) ಹದ್ದುಗಳಂತೆ ವರ್ತಿಸುತ್ತಿದ್ದೀರಿ. ಇಲ್ಲಿ ಜನರ ತಾಳ್ಮೆ ಕ್ಷೀಣಿಸುತ್ತಿದೆ. ಸದ್ಯಕ್ಕೆ ಶಿವಸೈನಿಕರು ಬೀದಿಗೆ ಬಂದಿಲ್ಲ. ಒಂದು ವೇಳೆ, ಅವರು ಹೊರಗೆ ಬಂದರೆ ಬೀದಿಗಳು ಹೊತ್ತಿ ಉರಿಯುತ್ತವೆ’ ಎಂದು ಎಚ್ಚರಿಸಿದ್ದಾರೆ.

‘ಕಳೆದ ರಾತ್ರಿ ಶರದ್‌ ಪವಾರ್‌ ಜೊತೆಗಿನ ಸಭೆಯ ಸಂದರ್ಭದಲ್ಲಿ 10 ಬಂಡಾಯ ಶಾಸಕರಿಂದ ನಮಗೆ ಕರೆ ಬಂದಿದೆ. ಬಿಜೆಪಿಯವರು ಸದನಕ್ಕೆ ಬರಲಿ, ಯಾರು ಬಲಶಾಲಿ ಎಂಬುದು ತಿಳಿಯಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಪಕ್ಷವು ತುಂಬಾ ದೊಡ್ಡದಾಗಿದೆ ಮತ್ತು ಅದನ್ನು ಅಷ್ಟು ಸುಲಭವಾಗಿ ಹೈಜಾಕ್ ಮಾಡಲು ಸಾಧ್ಯವಿಲ್ಲ. ಇದು ನಮ್ಮ ರಕ್ತದಿಂದ ಕಟ್ಟಲ್ಪಟ್ಟಿರುವ ಪಕ್ಷವಾಗಿದೆ. ಇದಕ್ಕಾಗಿ ಅನೇಕರು ತ್ಯಾಗ ಮಾಡಿದ್ದಾರೆ. ಇದನ್ನು ಹಣದಿಂದ ಒಡೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ ಮುಖಂಡರಿಗೆ ರಾವುತ್‌ ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನಾ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟ ಅಧಿಕಾರದಲ್ಲಿದೆ. ಸದ್ಯ ಶಿವಸೇನಾದಲ್ಲಿ ಬಿಕ್ಕಟ್ಟು ಬಿಗಡಾಯಿಸಿದೆ. ಶಾಸಕ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ ಕನಿಷ್ಠ 38 ಶಾಸಕರು ಮತ್ತು 10 ಪಕ್ಷೇತರರು ಅಸ್ಸಾಂನ ಗುವಾಹಟಿಯ ಹೋಟೆಲ್‌ವೊಂದರಲ್ಲಿ ಬೀಡುಬಿಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿನ ಬಲಾಬಲ

288 ಸದಸ್ಯರನ್ನು ಒಳಗೊಂಡಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನಾ 55 ಶಾಸಕರ ಬಲ ಹೊಂದಿದೆ. ಎನ್‌ಸಿಪಿ 53, ಕಾಂಗ್ರೆಸ್‌ನ 44, ಬಹುಜನ ವಿಕಾಸ ಆಘಾಡಿ 3, ಸಮಾಜವಾದಿ ಪಕ್ಷ, ಎಐಎಂಐಎಂ ಹಾಗೂ ಪ್ರಹಾರ್‌ ಜನಶಕ್ತಿ ಪಾರ್ಟಿಯ ತಲಾ ಇಬ್ಬರು ಶಾಸಕರಿದ್ದಾರೆ.

ಎಂಎನ್‌ಎಸ್‌, ಸಿಪಿಐ (ಎಂ), ಪಿಡಬ್ಲ್ಯುಪಿ, ಸ್ವಾಭಿಮಾನಿ ಪಕ್ಷ, ರಾಷ್ಟ್ರೀಯ ಸಮಾಜ ಪಾರ್ಟಿ, ಜನಸೂರ್ಯ ಶಕ್ತಿ ಪಾರ್ಟಿ ಹಾಗೂ ಕ್ರಾಂತಿಕಾರಿ ಶೆತಕರಿ ಪಕ್ಷದಿಂದ ತಲಾ ಒಬ್ಬರು ಶಾಸಕರಿದ್ದಾರೆ. 13 ಮಂದಿ ಪಕ್ಷೇತರ ಶಾಸಕರು ಹಾಗೂ ವಿರೋಧ ಪಕ್ಷ ಬಿಜೆಪಿಯಲ್ಲಿ 106 ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.