ADVERTISEMENT

ಮಹಾರಾಷ್ಟ್ರ ಸರ್ಕಾರಕ್ಕೆ ಅಪಾಯ ತಂದಿರುವ ಏಕನಾಥ ಶಿಂಧೆ ಯಾರು?

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 5:29 IST
Last Updated 22 ಜೂನ್ 2022, 5:29 IST
ಏಕನಾಥ ಶಿಂಧೆ
ಏಕನಾಥ ಶಿಂಧೆ    

ಮುಂಬೈ:ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೇತೃತ್ವದ, ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ (ಎಂವಿಎ) ಸರ್ಕಾರವು ಬಿಕ್ಕಟ್ಟಿಗೆ ಸಿಲುಕಿದೆ. ಶಿವಸೇನಾದ ಪ್ರಭಾವಿ ಮುಖಂಡ, ಸಚಿವ ಏಕನಾಥ ಶಿಂಧೆ ಅವರು ಪಕ್ಷದ ಕೆಲವು ಶಾಸಕರೊಂದಿಗೆ ಸೂರತ್‌ನ ಹೋಟೆಲ್‌ನಲ್ಲಿ ತಂಗಿದ್ದು, ಬಂಡಾಯದ ಬಾವುಟ ಹಾರಿಸಿ ದ್ದಾರೆ. ಎರಡೂವರೆ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸರ್ಕಾರದ ಉಳಿವಿನ ಬಗ್ಗೆ ಈ ಬಂಡಾಯವು ಪ್ರಶ್ನಾರ್ಥಕ ಚಿಹ್ನೆ ಮೂಡುವಂತೆ ಮಾಡಿದೆ.

ಠಾಣೆಯಲ್ಲಿ ಆರಂಭದ ದಿನಗಳಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಏಕನಾಥ ಶಿಂಧೆ, ಶಿವಸೇನಾ ಸೇರಿ, ತಮ್ಮ ಸಂಘಟನಾ ಕೌಶಲದಿಂದ ಪಕ್ಷದಲ್ಲಿ ಹಂತಹಂತವಾಗಿ ಮೇಲೇರಿದರು.ಸಾತಾರಾ ಜಿಲ್ಲೆಯ ಮರಾಠ ಮನೆತನಕ್ಕೆ ಸೇರಿದ ಶಿಂಧೆ ಅವರು ಈಗಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ.

ಪಕ್ಷ ನಿಷ್ಠ ಹಾಗೂ ಸಂಘಟನಾ ಚತುರ ಎಂಬ ವಿಶೇಷಣಗಳಿಗೆ ಏಕನಾಥ ಶಿಂಧೆ ಸರಿ ಹೊಂದುತ್ತಾರೆ. ಸಮಸ್ಯೆಗಳು ಎದುರಾದಾಗ ಅಥವಾ ಪ್ರಮುಖ ಕೆಲಸಗಳಿದ್ದಾಗ ಉದ್ಧವ್ ಠಾಕ್ರೆ ಅವರು ಮಾಡುವ ಕೆಲವು ಕರೆಗಳಲ್ಲಿ ಒಂದು ಕರೆಯಂತೂ ಶಿಂಧೆ ಅವರಿಗೆ ಹೋಗಿರುತ್ತದೆ.

ADVERTISEMENT

ಬಾಳಾ ಠಾಕ್ರೆ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಕಟ್ಟಿದ ಶಿವಸೇನಾವನ್ನು ಇಷ್ಟುಪಟ್ಟು ಸೇರಿದ್ದ ಶಿಂಧೆ, ಮತ್ತೊಬ್ಬ ಮುಖಂಡ ಠಾಣೆಯ ಆನಂದ್ ದಿಘೆ ಅವರ ನೆರಳಿನಲ್ಲಿ ಬೆಳೆದರು. 2001ರಲ್ಲಿ ದಿಘೆ ಸಾವಿನ ಬಳಿಕ ಆ ಭಾಗದಲ್ಲಿ ಪಕ್ಷದ ಸಂಘಟನೆ ಜವಾಬ್ದಾರಿ ವಹಿಸಿಕೊಂಡರು. 1997ರಲ್ಲಿ ಪುರಸಭೆಯ ಚುನಾವಣೆಯಲ್ಲಿ ಗೆದ್ದ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈಗ ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಕೆಲ ಸಮಯ ಕೆಲಸ ಮಾಡಿದ್ದಾರೆ.ಇವರ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಲೋಕಸಭಾ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.