ADVERTISEMENT

ಗಾಂಧಿಯ ಸ್ವದೇಶಿ ಚಳುವಳಿಯ ಹೊಸ ವ್ಯಾಖ್ಯಾನ ಆತ್ಮನಿರ್ಭರ ಭಾರತ: ಅಮಿತ್‌ ಶಾ

ಪಿಟಿಐ
Published 30 ಜನವರಿ 2022, 10:06 IST
Last Updated 30 ಜನವರಿ 2022, 10:06 IST
ಕೆವಿಐಸಿ ಗೋಡೆಯ ಮೇಲೆ ಮಣ್ಣಿನ ಕುಲ್ಹಾದ್‌ಗಳಿಂದ ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಭಿತ್ತಿಚಿತ್ರ
ಕೆವಿಐಸಿ ಗೋಡೆಯ ಮೇಲೆ ಮಣ್ಣಿನ ಕುಲ್ಹಾದ್‌ಗಳಿಂದ ನಿರ್ಮಿಸಿದ ಮಹಾತ್ಮ ಗಾಂಧಿ ಅವರ ಭಿತ್ತಿಚಿತ್ರ   

ಅಹಮದಾಬಾದ್‌:'ಮೇಕ್‌ ಇನ್‌ ಇಂಡಿಯಾ', 'ಆತ್ಮನಿರ್ಭರ ಭಾರತ' ಮತ್ತು 'ವೋಕಲ್‌ ಫಾರ್‌ ಲೋಕಲ್‌'ನಂತಹ ಯೋಜನೆಗಳು ಮಹಾತ್ಮ ಗಾಂಧಿ ಅವರ ಸ್ವದೇಶಿ ಚಳುವಳಿಯ ಹೊಸ ವ್ಯಾಖ್ಯಾನಗಳು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅಮಿತ್‌ ಶಾ ಅವರು ಅಹಮದಾಬಾದ್‌ನಲ್ಲಿ ಮಹಾತ್ಮ ಗಾಂಧಿ ಅವರ ಪುಣ್ಯತಿಥಿ ಹಾಗೂ ಹುತಾತ್ಮರ ದಿನದ ಅಂಗವಾಗಿ ಮಣ್ಣಿನ ಕುಲ್ಹಾದ್‌ಗಳಿಂದ ನಿರ್ಮಿಸಿದಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸ್ವಾತಂತ್ರ್ಯದ ನಂತರ ಭಾರತವನ್ನು ಮರುನಿರ್ಮಾಣ ಮಾಡಲು ಮಹಾತ್ಮ ಗಾಂಧಿ ಅವರ ಕಲ್ಪನೆಗಳು ಹಲವು ವರ್ಷಗಳಿಂದ ಮರೆತು ಹೋಗಿದ್ದವು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗಾಂಧಿ ಅವರ ಕಲ್ಪನೆಗಳಿಗೆ ಮರುಹುಟ್ಟು ನೀಡಿದರು ಎಂದು ಅಮಿತ್‌ ಶಾ ತಿಳಿಸಿದ್ದಾರೆ.

ADVERTISEMENT

ಸಬರಮತಿ ನದಿಯ ಮುಂಭಾಗದ ಖಾದಿ ಮತ್ತು ಗ್ರಾಮ ಉದ್ಯಮ ಕಮಿಷನ್‌(ಕೆವಿಐಸಿ)ನ ಗೋಡೆಯ ಮೇಲೆ ಭಿತ್ತಿಚಿತ್ರವನ್ನು ಅಳವಡಿಸಲಾಗಿದೆ. 100 ಚದರ ಮೀಟರ್‌ನ ಅಲ್ಯೂಮಿನಿಯಂ ಪ್ಲೇಟ್‌ ಮೇಲೆ ಮಣ್ಣಿನ ಕುಲ್ಹಾದ್‌ಗಳನ್ನು ಜೋಡಿಸಲಾಗಿದೆ. ಇದರಲ್ಲಿ 2,975 ಮಣ್ಣಿನ ಕುಲ್ಹಾದ್‌ಗಳನ್ನು ಬಳಕೆ ಮಾಡಲಾಗಿದ್ದು, ಇವುಗಳು ರಾಷ್ಟ್ರದ ಹಲವು ಭಾಗಗಳಿಂದ ಬಂದ ಮಣ್ಣಿನ ಪಾತ್ರೆ ಮಾಡುವ 75 ಕಸುಬುದಾರರು ಸೇರಿ ನಿರ್ಮಿಸಿದ್ದವುಗಳಾಗಿವೆ.

'ಭಾರತದ ಸ್ವಾತಂತ್ರ್ಯಕ್ಕಾಗಿ ಮಾತ್ರ ಮಹಾತ್ಮ ಗಾಂಧಿ ಹೋರಾಡಲಿಲ್ಲ, ಭಾರತವನ್ನು ಮರು ನಿರ್ಮಾಣದ ದೃಷ್ಟಿಯಿಂದ ಹಲವು ದಾರಿಗಳನ್ನು ತೋರಿಸಿಕೊಟ್ಟರು. ಸ್ವದೇಶಿ, ಸತ್ಯಾಗ್ರಹ, ಸ್ವಭಾಷಾ, ಅಪರಿಗ್ರಹ, ಪ್ರಾರ್ಥನೆ, ಉಪವಾಸ ಮತ್ತು ಸರಳತೆ ಮುಂತಾದ ಕಲ್ಪನೆಗಳನ್ನು ಹುಟ್ಟುಹಾಕುವ ಮೂಲಕ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತವನ್ನು ಮರು ನಿರ್ಮಾಣಕ್ಕೆ ಅಡಿಪಾಯವನ್ನು ಹಾಕಿದರು. ಹಲವು ವರ್ಷಗಳಿಂದ ಬಾಪು ಭಾವಚಿತ್ರಕ್ಕೆ ಗೌರವ ತೋರಿಸುತ್ತ, ಭಾಷಣಗಳಲ್ಲಿ ಅವರ ಹೆಸರನ್ನು ಉಲ್ಲೇಖಿಸುತ್ತ ಖಾದಿ, ಕರಕುಶಲ ವಸ್ತುಗಳು, ಸ್ವಭಾಷಾ ಬಳಕೆ ಮತ್ತು ಸ್ವದೇಶಿ ಕಲ್ಪನೆಗಳನ್ನು ಮರೆತಿರುವುದು ದುರದೃಷ್ಟಕರ' ಎಂದು ಅಮಿತ್‌ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.