ADVERTISEMENT

SIR | ಎ.ಐ ಬಳಸಿ ಎಸ್‌ಐಆರ್‌ ಹಗರಣ: ಮಮತಾ ಆರೋಪ

ಇಂದು ಸಿಇಸಿ ಭೇಟಿಯಾಗಲಿರುವ ಟಿಎಂಸಿ ನಿಯೋಗ

ಪಿಟಿಐ
Published 30 ಡಿಸೆಂಬರ್ 2025, 15:20 IST
Last Updated 30 ಡಿಸೆಂಬರ್ 2025, 15:20 IST
   

ನವದೆಹಲಿ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ದೊಡ್ಡ ಹಗರಣ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಎ.ಐ) ಬಳಸಿಕೊಂಡು ಇದನ್ನು ಮಾಡಲಾಗುತ್ತಿದೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

ಮಂಗಳವಾರ ಬಂಕುರಾ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಎಸ್‌ಐಆರ್‌ ಹೆಸರಿನಲ್ಲಿ ಆಯೋಗವು ನೀಡುತ್ತಿರುವ ಕಿರುಕುಳಕ್ಕೆ ಮತದಾರರು ಬೇಸತ್ತು ಹೋಗಿದ್ದಾರೆ. ರಾಜ್ಯದ ಅರ್ಹ ಮತದಾರರಲ್ಲಿ ಒಬ್ಬ ವ್ಯಕ್ತಿಯ ಹೆಸರಾದರೂ ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋದರೆ, ಟಿಎಂಸಿ ಕಾರ್ಯಕರ್ತರು ನವದೆಹಲಿಯಲ್ಲಿ ಚುನಾವಣಾ ಆಯುಕ್ತರ ಕಚೇರಿಗೆ ಘೇರಾವ್‌ ಹಾಕಲಿದ್ದಾರೆ’  ಎಂದು ಎಚ್ಚರಿಕೆ ನೀಡಿದರು.

ಸಿಇಸಿ ಭೇಟಿ ಇಂದು: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ‘ಎಸ್‌ಐಆರ್‌‘ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ದಾಖಲಿಸಲು ತೃಣಮೂಲ ಕಾಂಗ್ರೆಸ್‌ ನಿಯೋಗವು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರನ್ನು ಬುಧವಾರ ಭೇಟಿಯಾಗಲಿದೆ. ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ನೇತೃತ್ವದ ನಿಯೋಗವು ಎಸ್‌ಐಆರ್‌ ಬಗ್ಗೆ, ಸಿಇಒ ಅವರೊಂದಿಗೆ ಚರ್ಚೆ ನಡೆಸಲಿದೆ. 

ADVERTISEMENT

‘ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ಸಂಬಂಧಿಸಿ, ಕನಿಷ್ಠ 40 ಸಾವುಗಳು ಸಂಭವಿಸಿವೆ. ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಕೈಗಳಿಗೆ ರಕ್ತದ ಕಲೆಗಳು ಅಂಟಿವೆ’ ಎಂದು ತೃಣಮೂಲ ಕಾಂಗ್ರೆಸ್‌ ಈ ಹಿಂದೆ ಆರೋಪಿಸಿತ್ತು. ಈ ವಿಚಾರವಾಗಿ ಟಿಎಂಸಿ ರಾಜ್ಯಸಭಾ ಮುಖಂಡ ಡೆರಿಕ್ ಒಬ್ರಿಯಾನ್ ನೇತೃತ್ವದ 10 ಸದಸ್ಯರ  ನಿಯೋಗವು, ನವೆಂಬರ್‌ 28ರಂದು  ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು.

 

ನಕಲಿ ಸಾಫ್ಟ್‌ವೇರ್‌: ಕಾಂಗ್ರೆಸ್‌ ಆಕ್ಷೇಪ 

ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮುಖ್ಯವಾಗಿ ಸಾಫ್ಟ್‌ವೇರ್‌ನಲ್ಲಿ ಪದೇ ಪದೇ ಬದಲಾವಣೆ ಮಾಡುತ್ತಿರುವುದಕ್ಕೆ  ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ನಕಲಿ ಮತದಾರರನ್ನು ಪತ್ತೆ ಹಚ್ಚಲು  ನಕಲಿ ತಂತ್ರಾಂಶವನ್ನು ಬಳಸಲಾಗುತ್ತಿದೆಯೇ ಎಂದು ಪ್ರಶ್ನಿಸಿದೆ. 

‘ಎ.ಐ ಬಳಸಿ ಎಸ್ಐಆರ್‌ ಮಾಡಲಾಗುತ್ತಿದೆ’ ಎಂಬ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಬೆನ್ನಲ್ಲೇ ಕಾಂಗ್ರೆಸ್‌ ಸಾಫ್ಟ್‌ವೇರ್‌ ಬಗ್ಗೆ ಆಕ್ಷೇಪ ಎತ್ತಿದೆ. ‘ಚುನಾವಣಾ ಆಯೋಗವು ಪಾರದರ್ಶಕತೆ ಇಲ್ಲದೆ ವರ್ತಿಸುತ್ತಿದೆ. ಎಸ್‌ಐಆರ್‌ ಪ್ರಕ್ರಿಯೆಗಳು ಜನರಲ್ಲಿ ಗೊಂದಲ ಮೂಡಿಸುತ್ತಿದೆ’ ಎಂದು ಕಾಂಗ್ರೆಸ್‌ನ  ವಾರ್‌ ರೂಂ ಮುಖ್ಯಸ್ಥ ಸಂಸದ ಸಸಿಕಾಂತ್‌ ಸೆಂಥಿಲ್‌ ಆರೋಪಿಸಿದ್ದಾರೆ. 

ಬಿಹಾರದಲ್ಲಿ ‘ಎಸ್‌ಐಆರ್‌’ ವೇಳೆ ಅನುಸರಿಸಿದ್ದ ಮಾದರಿ ಮತ್ತು ಆಗ ಬಳಸಿದ್ದ ಸಾಫ್ಟ್‌ವೇರ್‌ ಅನ್ನು ಚುನಾವಣಾ ಆಯೋಗವು  ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಎರಡನೆಯ ಹಂತದ ಎಸ್‌ಐಆರ್‌ನಲ್ಲಿ ಕೈಬಿಟ್ಟಿರುವುದು ಅನುಮಾನ ಮೂಡಿಸಿದೆ.  ಬಿಹಾರದಲ್ಲಿ ಎಸ್‌ಐಆರ್‌ ಮುಗಿದಿದೆ. ಆದರೆ ಈಗಲೂ ಮತದಾರರ ಪಟ್ಟಿಯಲ್ಲಿ 14.5 ಲಕ್ಷ ನಕಲಿ ಮತದಾರರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಿಹಾರದಲ್ಲಿ ನಡೆದ ಎಸ್‌ಐಆರ್‌ನಲ್ಲೂ ‘ನಕಲಿ ತಂತ್ರಾಂಶ’ ಬಳಕೆಯಾಗಿತ್ತು ಎನ್ನುವುದನ್ನು ಇದು ಬೊಟ್ಟು ಮಾಡುತ್ತದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.