ADVERTISEMENT

ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 13:29 IST
Last Updated 20 ನವೆಂಬರ್ 2019, 13:29 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೊಲ್ಕತ್ತಾ:ಕೆಲವರು ಎನ್‌ಆರ್‌ಸಿ ಜಾರಿ ಮಾಡುವ ಮೂಲಕ ರಾಜ್ಯದಲ್ಲಿ ಸಂಘರ್ಷವನ್ನುಂಟು ಮಾಡಲು ಬಯಸುತ್ತಾರೆ. ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡಲು ನಾವು ಯಾವತ್ತೂ ಬಿಡಲಾರೆವು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇನೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

ದೇಶದಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಲಾಗುವುದು ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಸಾಗರ್‌ಧಿಗಿಯಲ್ಲಿನಡೆದ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ, ನಿಮ್ಮ ಪೌರತ್ವವನ್ನು ಕಸಿದು ನಿಮ್ಮನ್ನು ನಿರಾಶ್ರಿತರನ್ನಾಗಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಧರ್ಮದ ಆಧಾರದಲ್ಲಿ ಯಾರನ್ನೂ ವಿಭಜನೆ ಮಾಡಬಾರದು ಎಂದಿದ್ದಾರೆ.

ಎನ್‌ಆರ್‌ಸಿ ವಿಷಯದಲ್ಲಿ ಮಮತಾ ಮತ್ತು ಅಮಿತ್ ಶಾ ನಡುವೆ ಹಲವಾರು ಬಾರಿ ವಾಕ್ಸಮರಗಳು ನಡೆದಿವೆ.

ಬಂಗಾಳದಲ್ಲಿ ಬಿಜೆಪಿ ನೆಲೆಯೂರುತ್ತಿರುವುದನ್ನು ನೋಡಿ ಮಮತಾ ಬ್ಯಾನರ್ಜಿ ಎನ್‌ಆರ್‌ಸಿ ಬಗ್ಗೆ ಸುಳ್ಳುಗಳನ್ನು ಹಬ್ಬುತ್ತಿದ್ದಾರೆ ಎಂದು ಶಾ ಆರೋಪಿಸಿದ್ದರು.

ಬಿಜೆಪಿ ಎನ್‌ಆರ್‌ಸಿ ವಿಷಯ ಪ್ರಸ್ತಾಪಿಸಿ ಬಂಗಾಳದಲ್ಲಿ ಭಯ ಸೃಷ್ಟಿಸಿದ್ದು, ಇದರಿಂದ 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿಗೆ ನಾಚಿಕೆಯಾಗಬೇಕು. ಎನ್‌ಆರ್‌ಸಿ ಬಂಗಾಳದಲ್ಲಿ ಜಾರಿ ಮಾಡಲು ಬಿಡುವುದಿಲ್ಲ ಎಂದಿದ್ದಾರೆ ಮಮತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.