ADVERTISEMENT

ನೀತಿ ಸಂಹಿತೆ ಉಲ್ಲಂಘಿಸಿಲ್ಲ: ಚುನಾವಣಾ ಆಯೋಗದ ನೋಟಿಸ್‌ಗೆ ಮಮತಾ ಪ್ರತಿಕ್ರಿಯೆ

ಏಜೆನ್ಸೀಸ್
Published 10 ಏಪ್ರಿಲ್ 2021, 13:24 IST
Last Updated 10 ಏಪ್ರಿಲ್ 2021, 13:24 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆ (ಸಿಎಪಿಎಫ್‌) ವಿರುದ್ಧಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಮಮತಾ, ತಾವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರೀಯ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಅವರು ‘ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅತಿರೇಕದ ಹೇಳಿಕೆ’ ನೀಡಿದ್ದಾರೆ ಎಂದು ಚುನಾವಣಾ ಆಯೋಗವು ಗುರುವಾರ ರಾತ್ರಿ ನೋಟಿಸ್‌ ನೀಡಿತ್ತು. ಮಾತ್ರವಲ್ಲದೆ ʼಸಿಎಪಿಎಫ್‌ ಕುರಿತಾಗಿ ಮಾರ್ಚ್‌28 ಮತ್ತು ಏಪ್ರಿಲ್‌ 7ರಂದು ನೀಡಿರುವ ಹೇಳಿಕೆಗಳ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಏಪ್ರಿಲ್‌ 10ರ ಒಳಗೆ ವಿವರಿಸಬೇಕು ಎಂದು ಸೂಚಿಸಿತ್ತು.

ಈ ಸಂಬಂಧ ಆಯೋಗಕ್ಕೆ ಪತ್ರ ಬರೆದಿರುವ ಮಮತಾ, ʼಸಿಎಪಿಎಫ್‌ ವಿರುದ್ಧ ಮತದಾರರನ್ನು ಪ್ರಚೋದಿಸುವ ಅಥವಾ ಪ್ರಭಾವಿಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ. ನಾನು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂಬುದು ಸ್ಪಷ್ಟವಾಗಿದೆʼ ಎಂದು ತಿಳಿಸಿದ್ದಾರೆ.

ADVERTISEMENT

ವಿಧಾನಸಭೆಗೆ ನಡೆದ ಮೊದಲ ಮತ್ತು ಎರಡನೇ ಹಂತದ ಮತದಾನದ ವೇಳೆಕೇಂದ್ರ ಪಡೆಗಳು ಬಿಜೆಪಿಪರಕೆಲಸ ಮಾಡಿದ್ದವು ಎಂದು ಆರೋಪಿಸಿದ್ದರು.

ಮಮತಾ ಅವರುಈ ಮೊದಲು ಚುನಾವಾಣಾ ಪ್ರಚಾರದ ವೇಳೆಮುಸ್ಲಿಂ ಮತದಾರರು ತಮ್ಮ ಮತಗಳು ವಿವಿಧ ರಾಜಕೀಯ ಪಕ್ಷಗಳಿಗೆ ವಿಭಜನೆಯಾಗದಂತೆ ನೋಡಿಕೊಳ್ಳಬೇಕು.ಕೋಮು ನೆಲೆಯಲ್ಲಿ ಎಲ್ಲ ಮತಗಳನ್ನು ತೃಣಮೂಲ ಕಾಂಗ್ರೆಸ್‌ಗೇ ನೀಡಬೇಕೆಂದು ಮನವಿ ಮಾಡಿದ್ದರು. ಈ ವಿಚಾರವಾಗಿಯೂ ಚುನಾವಣಾ ಆಯೋಗ‌ಏಪ್ರಿಲ್‌ 3ರಂದು ನೋಟಿಸ್‌ ಜಾರಿ ಮಾಡಿತ್ತು.

ಇಂದು ಪಶ್ಚಿಮ ಬಂಗಾಳ44 ವಿಧಾನಸಭೆ ಕ್ಷೇತ್ರಗಳಿಗೆ ನಾಲ್ಕನೇ ಹಂತದಲ್ಲಿ ಮತದಾನ ನಡೆಯಿತು. ಇನ್ನೂ ನಾಲ್ಕು ಹಂತಗಳ ಮತದಾನ ನಡೆಯಲಿದ್ದು, ಮೇ2 ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.