ಭೋಪಾಲ್: ‘ಪ್ರಚೋದನಕಾರಿ ಸಂದೇಶಗಳ ಮೂಲಕ ದ್ವೇಷ ಹರಡಲು ಯತ್ನಿಸಿದ ಆರೋಪದಡಿ ಬಂಧಿಸಲ್ಪಟ್ಟ ವ್ಯಕ್ತಿಗಳಲ್ಲಿ ಒಬ್ಬ ಆರೋಪಿಯು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸಾಕ್ಷಿಗಳು ಸಿಕ್ಕಿವೆ’ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸೋಮವಾರ ಹೇಳಿದರು.
ಬಂಧಿತನನ್ನು ಅಲ್ತಾಮಾಶ್ ಖಾನ್ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂನೊಂದಿಗೆ ಸಂಬಂಧವನ್ನು ಹೊಂದಿದ್ದಾನೆ ಎಂದು ಅವರು ತಿಳಿಸಿದರು.
ಬಳೆ ಮಾರಾಟಗಾರನ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶಗಳ ಮೂಲಕ ದ್ವೇಷ ಸೃಷ್ಟಿಸಲು ಯತ್ನಿಸಿದ ಮತ್ತು ಇಂದೋರ್ ನಗರದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪದಡಿ ಅಲ್ತಾಮಾಶ್ ಖಾನ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿತ್ತು.
‘ಬಳೆ ಮಾರಾಟಗಾರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ನ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಅಲ್ತಾಮಾಶ್ ಖಾನ್ ವಿರುದ್ಧ ತನಿಖೆ ವೇಳೆ ಸಾಕ್ಷಿಗಳು ಸಿಕ್ಕಿವೆ. ಅಲ್ತಾಮಾಶ್, ವ್ಯಾಟ್ಸ್ಆ್ಯಪ್ ಮತ್ತು ಫೇಸ್ಬುಕ್ ಮೂಲಕ ಸಂಪರ್ಕವನ್ನು ಹೊಂದಿದ್ದಾನೆ’ ಎಂದು ಮಿಶ್ರಾ ಅವರು ಮಾಹಿತಿ ನೀಡಿದರು.
‘ಅಲ್ತಾಮಾಶ್ನಿಂದ ವಿಡಿಯೊ, ಆಡಿಯೊ ಸೇರಿದಂತೆ ಆಕ್ಷೇಪಾರ್ಹ ವಸ್ತುಗಳು ಸಿಕ್ಕಿದೆ. ಈ ವಿಡಿಯೊಗಳನ್ನು ಆತ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದ. ಈ ಆಕ್ಷೇಪಾರ್ಹ ವಸ್ತುಗಳಿಂದ ಮಧ್ಯಪ್ರದೇಶದಲ್ಲಿ ಅಶಾಂತಿ ಸೃಷ್ಟಿಯಾಗಬಹುದು’ ಎಂದು ಅವರು ಹೇಳಿದರು.
‘ಬಂಧಿತ ಇತರ ಆರೋಪಿಗಳನ್ನು ಮೊಹಮ್ಮದ್ ಅನ್ಸಾರಿ, ಜಾವೇದ್ ಖಾನ್, ಸೈಯದ್ ಇರ್ಫಾನ್ ಆಲಿ ಎಂದು ಗುರುತಿಸಲಾಗಿದೆ. ಇವರೆಲ್ಲರೂ 20–30 ವಯಸ್ಸಿನೊಳಗಿನವರು’ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.