ADVERTISEMENT

ಕೇರಳ: ವ್ಯಕ್ತಿಯೊಬ್ಬನನ್ನು ಅಪಹರಿಸಿ ಹತ್ಯೆ, ಪೊಲೀಸ್ ಠಾಣೆ ಮುಂದೆ ಶವ ಎಸೆದ ಆರೋಪಿ

ಪಿಟಿಐ
Published 17 ಜನವರಿ 2022, 11:03 IST
Last Updated 17 ಜನವರಿ 2022, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಟ್ಟಾಯಂ: ಕ್ರಿಮಿನಲ್‌ ಪ್ರಕರಣಗಳ ಆರೋಪಿಯೊಬ್ಬ, 19 ವರ್ಷದ ಯುವಕನನ್ನು ಅಪಹರಿಸಿ, ಕೊಲೆ ಮಾಡಿ, ಶವವನ್ನು ಇಲ್ಲಿನ ಪೊಲೀಸ್ ಠಾಣೆಯ ಮುಂದೆ ಸೋಮವಾರ ಮುಂಜಾನೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಮಿನಲ್‌ ಪ್ರಕರಣಗಳಲ್ಲಿ ಪೊಲೀಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಜೋಮನ್ ಕೆ ಜೋಸ್ (40) ಎಂಬಾತ ಶಾನ್ ಬಾಬುವನ್ನು ಅಪಹರಿಸಿ ಕೊಂದ ಆರೋಪದ ಮೇಲೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಾಬು ಅವರನ್ನು ನಿನ್ನೆ ರಾತ್ರಿ ಜೋಸ್ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸಮೀಪದಲ್ಲಿರುವ ಕೊಟ್ಟಾಯಂ ಪೂರ್ವ ಪೊಲೀಸ್ ಠಾಣೆಯ ಮುಂದೆ ಬಾಬು ಶವವನ್ನು ಎಸೆದು ಜೋಸ್ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಡ್ರಗ್ಸ್‌ನ ಅಮಲಿನಲ್ಲಿದ್ದ ಜೋಸ್‌ನನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ADVERTISEMENT

ಪೊಲೀಸರು ಕೂಡಲೇ ಬಾಬುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ನಿನ್ನೆ ರಾತ್ರಿಯೇ ತನ್ನ ಮಗನನ್ನು ಜೋಸ್ ಎಂಬಾತ ಆಟೋರಿಕ್ಷಾದಲ್ಲಿ ಅಪಹರಿಸಿದಾಗ ತಾನು ಪೊಲೀಸರಿಗೆ ದೂರು ನೀಡಿದ್ದೆ ಎಂದು ಬಾಬು ಅವರ ತಾಯಿ ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದಷ್ಟೇ ಸರಣಿ ಅಪರಾಧಿ ಜೋಸ್‌ನ ಮೇಲೆ ಕೇರಳ ಸಾಮಾಜಿಕ ಚಟುವಟಿಕೆಗಳ ವಿರೋಧಿ ತಡೆ ಕಾಯ್ದೆ (KAAPA) ಅನ್ನು ದಾಖಲಿಸಲಾಗಿತ್ತು ಮತ್ತು ಕೊಟ್ಟಾಯಂ ಜಿಲ್ಲೆಯನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

ಕೊಟ್ಟಾಯಂಗೆ ಹಿಂದಿರುಗಿದ ಜೋಸ್, ತನ್ನ ಗ್ಯಾಂಗ್ ಅನ್ನು ಮರುಸಂಘಟಿಸಲು ಬಯಸಿದ್ದ. ಆ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಇತರ ಗ್ಯಾಂಗ್‌ಗಳ ಬಾಬು ಮಾಹಿತಿ ಸಂಗ್ರಹಿಸಿದ್ದ ಕಾರಣ, ಆತನನ್ನು (ಬಾಬು)‌ ಜೋಸ್ ಅಪಹರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.