ADVERTISEMENT

ಮಕ್ಕಳಿಗಿಲ್ಲ ನೌಕರಿ:ಬೇಸತ್ತ ಅಪ್ಪ ರ‍್ಯಾಲಿಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 14:14 IST
Last Updated 26 ಆಗಸ್ಟ್ 2019, 14:14 IST
   

ಚಂಡೀಗಢ: ಮಕ್ಕಳಿಗೆ ಉದ್ಯೋಗ ಸಿಗದ ಕಾರಣ ಬೇಸತ್ತ ವ್ಯಕ್ತಿಯೊಬ್ಬರು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಜನ್ ಆಶೀರ್ವಾದ್ ರ‍್ಯಾಲಿಯಲ್ಲಿ ಕಿಚ್ಚಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪೊಲೀಸರ ಪ್ರಕಾರ ಸೋಮವಾರ ಮಧ್ಯಾಹ್ನ ಸೋನಿಪತ್ ಎಂಬಲ್ಲಿಈ ಘಟನೆ ನಡೆದಿದೆ. ಇಲ್ಲಿನ ರಾಥ್‌ಧನಾ ಗ್ರಾಮದಲ್ಲಿನ ರಾಜೇಶ್ ಕುಮಾರ್ ಎಂಬ ವ್ಯಕ್ತಿ ರ‍್ಯಾಲಿಯಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸ್ವತಃ ಕಿಚ್ಚು ಹಚ್ಚಿ ಗುಂಪಿನ ಮಧ್ಯೆ ಓಡಿ ಬಂದಾಗ ಪಕ್ಕದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ ಎಂದು ಕೆಲವುಮೂಲಗಳು ವರದಿ ಮಾಡಿವೆ.

ADVERTISEMENT

ರಾಜೇಶ್ ಕುಮಾರ್ ಅವರನ್ನು ರೋಹ್ಟಕ್‌ನಲ್ಲಿರುವ ಪೋಸ್ಟ್ ಗ್ರಾಜ್ಯುವೇಟ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಪ್ರಾಥಮಿಕ ವರದಿಗಳ ಪ್ರಕಾರ ರಾಜೇಶ್ ಅವರ ಮಕ್ಕಳು ನಿರುದ್ಯೋಗಿಗಳಾಗಿದ್ದು ಇದರಿಂದ ಅವರು ಬೇಸತ್ತಿದ್ದರು. ರಾಜೇಶ್ ಅವರು ಕೆಲವು ದಿನಗಳ ಹಿಂದೆ ನವದೆಹಲಿಯ ಹರ್ಯಾಣ ಭವನದಲ್ಲಿ ಖಟ್ಟರ್ ಅವರನ್ನು ಭೇಟಿಯಾಗಿ ಮಕ್ಕಳ ನಿರುದ್ಯೋಗದ ಬಗ್ಗೆ ಹೇಳಿದ್ದರು. ಮಕ್ಕಳಿಗೆ ಗ್ರೂಪ್ ಡಿ ಹುದ್ದೆ ನೀಡುವುದಾಗಿ ಖಟ್ಟರ್ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಭರವಸೆ ಪೂರೈಸದೇ ಇದ್ದಾಗ ರಾಜೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಖಟ್ಟರ್ ರಾಜ್ಯದಾದ್ಯಂತ ಪ್ರವಾಸ ನಡೆಸುತ್ತಿದ್ದಾರೆ. ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಜನ ಆಶೀರ್ವಾದ್ ಯಾತ್ರೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.