ADVERTISEMENT

ಸಿಎಎ ಹೋರಾಟಗಾರರ ಮೇಲೆ ಗುಂಡು ಹಾರಿಸಿದ್ದ ಕಪಿಲ್‌ ‘ಆಪ್‌’ ಸದಸ್ಯ ಎಂದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 15:32 IST
Last Updated 4 ಫೆಬ್ರುವರಿ 2020, 15:32 IST
ಸಿಎಎ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಪಿಲ್‌ ಗುಜ್ಜರ್‌ನನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿರುವ ಪೊಲೀಸರು
ಸಿಎಎ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಕಪಿಲ್‌ ಗುಜ್ಜರ್‌ನನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿರುವ ಪೊಲೀಸರು    

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರತ್ತ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಶಾಹೀನ್‌ ಬಾಗ್‌ನ ಪ್ರತಿಭಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಹಾಕಲಾಗಿದ್ದ ಬ್ಯಾರಿಕೇಡ್‌ ಬಳಿ ನಿಂತಿದ್ದ ಕಪಿಲ್‌ ಗುಜ್ಜರ್‌ ಜೈ ಶ್ರೀರಾಮ್‌ ಎಂದು ಕೂಗುತ್ತಾ, ಗುಂಡು ಹಾರಿಸಿದ್ದ. ತಕ್ಷಣವೇ ಆತನನ್ನು ವಶಕ್ಕೆ ಪಡೆದಿದ್ದರು.

ಕಪಿಲ್‌ ಗುಜ್ಜರ್‌ನನ್ನು ಎರಡು ದಿನಗಳ ತೀವ್ರ ವಿಚಾರಣೆ ನಡೆಸಿದ ಪೊಲೀಸರು ಇಂದು ಆತ ಎಎಪಿ ಕಾರ್ಯಕರ್ತರ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

‘ವಿಚಾರಣೆ ವೇಳೆ ಕಪಿಲ್‌ ಗುಜ್ಜರ್‌ ತಾನು ಎಎಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದ. ಆತನ ಮೊಬೈಲ್‌ ಫೋನ್‌ ಪರಿಶೀಲಿಸಿದಾಗ ಆತ ಮತ್ತು ಆತನ ತಂದೆ ಎಎಪಿ ಸೇರ್ಪಡೆಯಾಗಿರುವ ಫೋಟೋಗಳು ಲಭ್ಯವಾಗಿವೆ,’ ಎಂದು ದೆಹಲಿ ಸಿಸಿಬಿಯ ಹಿರಿಯ ಅಧಿಕಾರಿ ರಾಜೇಶ್‌ ದಿಯೋ ತಿಳಿಸಿದ್ದಾರೆ.

ಇನ್ನು ದಾಳಿ ಕೋರ ಆಪ್‌ ಕಾರ್ಯಕರ್ತ ಎಂಬುದನ್ನು ನಿರಾಕರಿಸಿರುವಎಎಪಿಯ ರಾಜ್ಯಸಭಾ ಸದಸ್ಯಸಂಜಯ್‌ ಸಿಂಗ್‌ ‘ದೆಹಲಿ ಚುನಾವಣೆಗೆ ಇನ್ನು ಮೂರು ದಿನಗಳು ಉಳಿದಿವೆ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಈ ಬೆಳವಣಿಗೆಯ ಕುರಿತು ಮಾತನಾಡಿದ್ದು, ‘ಎಎಪಿಯ ಬಣ್ಣ ದೇಶದ ಜನರ ಎದುರುಬಯಲಾಗಿದೆ,’ ಎಂದು ಹೇಳಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಸದ್ಯ ಈ ಬೆಳವಣಿಗೆಯೂ ಚರ್ಚೆಯ ಮುಖ್ಯ ವಿಷಯವಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.