
ನವದೆಹಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಆಗಸ್ಟ್ 13ರಿಂದ ಮತ್ತೆ ಆರು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ಸಂಬಂಧ ಶಾಸನಬದ್ಧ ನಿರ್ಣಯ ಕೈಗೊಳ್ಳಲು ರಾಜ್ಯಸಭೆಯನ್ನು ಕೋರಲಾಗಿದೆ. ರಾಜ್ಯಸಭೆಯು ಈ ಬಗ್ಗೆ ಮುಂದಿನ ವಾರ ಚರ್ಚೆ ನಡೆಸಲು ಪಟ್ಟಿ ಮಾಡಿದೆ.
‘ಮಣಿಪುರದಲ್ಲಿ ಸಂವಿಧಾನದ 356 ವಿಧಿಯಡಿಯಲ್ಲಿ ಈ ವರ್ಷ ಫೆಬ್ರುವರಿ 13ರಿಂದ ಜಾರಿಯಾಗಿದ್ದ ರಾಷ್ಟ್ರಪತಿ ಆಡಳಿತವನ್ನು ಮತ್ತೆ ಆರು ತಿಂಗಳು ವಿಸ್ತರಿಸಲು ಸದನದ ಒಪ್ಪಿಗೆ ಬೇಕಿದೆ ಎಂಬ ನಿರ್ಣಯವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಮಂಡಿಸಿದರು’ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.
2025ರ ಫೆಬ್ರುವರಿ 9ರಂದು ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಫೆಬ್ರುವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
ರಾಜ್ಯದಲ್ಲಿ 2023ರ ಮೇ ತಿಂಗಳಿನಿಂದ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 260 ಮಂದಿ ಹತ್ಯೆಗೀಡಾಗಿದ್ದಾರೆ ಮತ್ತು ಸಾವಿರಾರು ಜನರು ಆಶ್ರಯ ಕಳೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.