ADVERTISEMENT

ಮುಕ್ತವಾಗಿ ಓಡಾಡುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ: ಮೋದಿಗೆ ಸಿಸೋಡಿಯಾ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2022, 5:49 IST
Last Updated 21 ಆಗಸ್ಟ್ 2022, 5:49 IST
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ   

ನವದೆಹಲಿ: ‘ನಾನು ದೆಹಲಿಯಲ್ಲಿ ಮುಕ್ತವಾಗಿ ಓಡಾಡುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ ಮೋದಿ ಜೀ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸವಾಲು ಹಾಕಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿದೆ.

ತಮ್ಮ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ ಮಾಡಿರುವುದನ್ನು ಖಂಡಿಸಿ ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿರುವ ಸಿಸೋಡಿಯಾ, ‘ನಮ್ಮ ಮೇಲೆ ನೀವು ಎಲ್ಲಾ ದಾಳಿಗಳನ್ನು (ಸಿಬಿಐ) ನಡೆಸಿದ್ದೀರಿ. ಆದರೆ, ನಮ್ಮ ಬಳಿ ಏನೂ ಪತ್ತೆಯಾಗಿಲ್ಲ. ಒಂದು ಪೈಸೆಯೂ ಹಣ ಸಿಕ್ಕಿಲ್ಲ. ಈಗ ಮನೀಶ್ ಸಿಸೋಡಿಯಾ ಸಿಗುತ್ತಿಲ್ಲ ಎಂದು ನನಗೆ ಲುಕ್‌ ಔಟ್ ನೋಟಿಸ್‌ ನೀಡಿದ್ದೀರಿ. ಇದೇನು ಗಿಮಿಕ್, ಮೋದಿ ಜೀ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ನಾನು ಸಾಮಾನ್ಯನಂತೆ ದೆಹಲಿಯಲ್ಲಿ ಮುಕ್ತವಾಗಿ ತಿರುಗುತ್ತಿದ್ದೇನೆ, ಎಲ್ಲಿಗೆ ಬರಬೇಕು ಹೇಳಿ... ಬರುತ್ತೇನೆ ಎಂದು ಮೋದಿ ವಿರುದ್ಧ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.

‘ನನ್ನ ವಿರುದ್ಧ ಸಿಬಿಐ ಲುಕ್ ಔಟ್ ನೋಟಿಸ್ ಹೊರಡಿಸಿರುವುದು ದುರದೃಷ್ಟಕರ. ಇಂದು ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಸಮಸ್ಯೆ ತಲೆದೂರಿದೆ. ಇವುಗಳಿಗೆ ಪರಿಹಾರ ನೀಡುವ ನಾಯಕನಿಗಾಗಿ ಜನರು ಹುಡುಕಾಟ ನಡೆಸುತ್ತಿದ್ದಾರೆ. 2024ರಲ್ಲಿ ಸಾರ್ವಜನಿಕರು (ಮತದಾರರು) ಮೋದಿ ಅವರಿಗೆ ಲುಕ್ ಔಟ್ ನೋಟಿಸ್ ನೀಡಲಿದ್ದಾರೆ’ ಎಂದು ಸಿಸೋಡಿಯಾ ವ್ಯಂಗ್ಯವಾಡಿದ್ದಾರೆ.

ಇವುಗಳನ್ನೂ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.