ದೆಹಲಿ: ಮನಮೋಹನ್ ಸಿಂಗ್ ಮತ್ತು ಅಂದಿನ ಕೃಷಿ ಸಚಿವ ಶರದ್ ಪವಾರ್ ಕೃಷಿ ರಂಗದ ಸುಧಾರಣೆಗೆ ಮುಂದಾಗಿದ್ದರಾದರೂ, ಕೆಲ ಶಕ್ತಿಗಳ ಒತ್ತಡದಿಂದ ಯುಪಿಎ ಇಂಥ ಸುಧಾರಣೆಗೆ ಧೈರ್ಯ ತೋರಿರಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬುಧವಾರ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
‘ತಮ್ಮ ಅವಧಿಯಲ್ಲಿ ಇಂಥ ಒಳ್ಳೆ ಕಾಯ್ದೆ ಜಾರಿಗೆ ತರಲಾಗಲಿಲ್ಲ ಎಂಬ ಕಾರಣಕ್ಕೆ ಮತ್ತು ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ. ಮನಮೋಹನ್ ಸಿಂಗ್ ಮತ್ತು ಅಂದಿನ ಕೃಷಿ ಸಚಿವ ಶರದ್ ಪವಾರ್ ಅವರು ಕೃಷಿ ಕ್ಷೇತ್ರದ ಸುಧಾರಣೆಗೆ ಮುಂದಾಗಿದ್ದರು. ಆದರೆ, ಕೆಲ ಮಂದಿಯ ಒತ್ತಡಗಳಿಂದಾಗಿ ಯುಪಿಎ ಈ ಸುಧಾರಣೆಗೆ ಧೈರ್ಯ ತೋರಿರಲಿಲ್ಲ,’ ಎಂದು ತೋಮರ್ ಹೇಳಿದ್ದಾರೆ.
‘ಹೊಸ ಕೃಷಿ ಕಾಯ್ದೆಯು ರೈತರನ್ನು ಎಪಿಎಂಸಿಯ ಸಂಕೋಲೆಗಳಿಂದ ಬಿಡಿಸಲಿದೆ. ಬಿತ್ತನೆಯ ಅವಧಿಯಲ್ಲೇ ರೈತರಿಗೆ ಬೆಲೆ ಖಾತರಿ ಸಿಗಲಿದೆ. ಈ ಕಾಯ್ದೆ ಜಾರಿಗೆ ಬರಲು ಬಿಡಿ ಎಂದು ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಇದು ಖಚಿತವಾಗಿಯೂ ರೈತರ ಬದುಕಿನಲ್ಲಿ ಬದಲಾವಣೆ ತರಲಿದೆ,’ ಎಂದು ತೋಮರ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.