ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್
ಚೆನ್ನೈ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ರೂಪಿಸಿದ ಆರ್ಥಿಕ ನೀತಿಗಳು ದೇಶದ ಬೆಳವಣಿಗೆಗೆ ಆಧಾರವಾಗಿದೆ. ಅವರ ಆಳ್ವಿಕೆಯಲ್ಲಿ ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಲಾಯಿತು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಚೆನ್ನೈನಲ್ಲಿ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) ಆಯೋಜಿಸಿದ್ದ ಸ್ಮರಣಾರ್ಥ ಸಭೆಯಲ್ಲಿ ಮನಮೋಹನ ಸಿಂಗ್ ಅವರಿಗೆ ಸ್ಟಾಲಿನ್ ಶ್ರದ್ಧಾಂಜಲಿ ಸಲ್ಲಿಸಿದರು.
‘ಮನಮೋಹನ ಸಿಂಗ್ ಅವರು ಜನರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ತಂದರು. ಅವರು ರೂಪಿಸಿದ ಆರ್ಥಿಕ ನೀತಿಗಳು ದೇಶದ ಬೆಳವಣಿಗೆಗೆ ಅಡಿಪಾಯವಾಗಿವೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದಾರೆ’ ಎಂದು ಸ್ಟಾಲಿನ್ ಹೇಳಿದ್ದಾರೆ.
‘2004ರಲ್ಲಿ ಚುನಾವಣೆಯ ಗೆಲುವಿನ ನಂತರ ಪ್ರಧಾನಿ ಸ್ಥಾನ ಸಿಂಗ್ ಅವರನ್ನು ಅರಸಿ ಬಂದಿತ್ತು. ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಸೇರಿದಂತೆ ಎಲ್ಲರೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಸ್ಥಾನವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ಆದರೆ, ಅವರು ನಿರಾಕರಿಸಿದರು. ಅದನ್ನು ಮನಮೋಹನ ಸಿಂಗ್ ಅವರಿಗೆ ನೀಡಿದರು’ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಈರೋಡ್ ವೆಂಕಟ ಕೃಷ್ಣಸ್ವಾಮಿ ಸಂಪತ್ (ಇ.ವಿ.ಕೆ.ಎಸ್.) ಇಳಂಗೋವನ್ ಅವರನ್ನು ಸ್ಮರಿಸಿದ ಸ್ಟಾಲಿನ್, ನಾವು ಇಬ್ಬರು ಪ್ರಮುಖ ನಾಯಕರನ್ನು ಕಳೆದುಕೊಂಡಿದ್ದೇವೆ. ಅವರ ಸಾವಿನಿಂದ ಅಪಾರ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.