ಲಖನೌ: ‘ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮ ಮಂದಿರದ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ರಾಮ ಪಥವನ್ನು ಅಗಲಗೊಳಿಸಲು ಹನ್ನೆರಡಕ್ಕೂ ಹೆಚ್ಚು ಹಳೆಯ ದೇವಾಲಯಗಳು ಹಾಗೂ ಅಂಗಡಿಗಳನ್ನು ನೆಲಸಮ ಮಾಡುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇವಾಲಯಗಳ ನೆಲಸಮವನ್ನು ವಿರೋಧಿಸಿದ್ದ ಸ್ವಾಮೀಜಿಗಳ ಸಮೂಹವು ಪ್ರಸ್ತುತ ಶಾಂತವಾಗಿದ್ದು, ಅನೇಕರು ಈ ಕುರಿತು ಪ್ರತಿಭಟಿಸಲು ಮುಂದೆ ಬರುತ್ತಿಲ್ಲ. ಆದರೆ ಅಂಗಡಿಗಳ ತೆರವನ್ನು ವಿರೋಧಿಸಿ ಅನೇಕ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
‘ರಾಮ ಮಂದಿರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ದೇವಾಲಯದ ಮುಂಭಾಗದ ರಸ್ತೆಯನ್ನು ವಿಸ್ತರಿಸುವುದು ಅಗತ್ಯವಾಗಿದೆ. ಆದರೆ, ಅಯೋಧ್ಯೆಯು ತನ್ನ ಗುರುತನ್ನು ಕಳೆದುಕೊಳ್ಳದಂತೆ ಸರ್ಕಾರವು ನೋಡಿಕೊಳ್ಳಬೇಕಿದೆ. ನೆಲಸಮ ಪಟ್ಟಿಯಲ್ಲಿರುವ ದೇವಾಲಯಗಳು ಅತ್ಯಂತ ಭವ್ಯವಾದ ದೇವಾಲಯಗಳು. ಈ ದೇವಾಲಯಗಳಿಗೂ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದರು’ ಎಂದು ಅಯೊಧ್ಯೆ ಮೂಲದ ಸ್ವಾಮೀಜಿಯೊಬ್ಬರು ಹೇಳಿದರು.
ತಲೆಮಾರುಗಳಿಂದ ಮಂದಿರದ ಬಳಿ ವ್ಯಾಪಾರ ನಡೆಸುತ್ತಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ನೆಲಸಮ ಮಾಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ‘ಅಧಿಕಾರಿಗಳು ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿಗೆ ಬದಲಾಗಿ ಸೂಕ್ತ ಪರಿಹಾರ ನೀಡುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘ಈ ಮೊದಲು, ಸೂಕ್ತ ಪರಿಹಾರ ನೀಡದೇ ಅಂಗಡಿ ತೆರವುಗೊಳಿಸುವುದಿಲ್ಲವೆಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈಗ ಅದೇ ಅಧಿಕಾರಿಗಳು ತಾವು ನೀಡಿರುವ ಭರವಸೆಯಿಂದ ಹಿಂದೆ ಸರಿದಿದ್ದಾರೆ. ತೆರವುಗೊಳಿಸಲಿರುವ ಅಂಗಡಿಗಳಿಗೆ ಸೂಕ್ತ ಪರಿಹಾರ ನೀಡವಂತೆ ಆಂದೋಲನ ಪ್ರಾರಂಭಿಸುತ್ತೇವೆ’ ಎಂದೂ ಅವರು ಎಚ್ಚರಿಸಿದರು.
‘ರಸ್ತೆ ಅಗಲಗೊಳಿಸುವ ವಿಚಾರವಾಗಿ ವ್ಯಾಪಾರಿಗಳಲ್ಲಿ ಸ್ವಲ್ಪ ಗೊಂದಲ ಮೂಡಿದೆ. ನಿಯಮನುಸಾರವಾಗಿಯೇ ವ್ಯಾಪಾರಿಗಳಿಗೆ ಪರಿಹಾರ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.