ಬಸ್ ಪಲ್ಟಿ (ಸಾಂದರ್ಭಿಕ ಚಿತ್ರ)
ಇಂದೋರ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಮಧ್ಯಪ್ರದೇಶದ ಇಂದೋರ್ ಮಾರ್ಗವಾಗಿ ಹೊರಟಿದ್ದ ಯಾತ್ರಿಗಳನ್ನು ಹೊತ್ತ ಬಸ್ಸೊಂದು ಪಲ್ಟಿಯಾಗಿದ್ದರಿಂದ, ಅದರಲ್ಲಿದ್ದ ಹತ್ತು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದೋರ್ ನಗರದಿಂದ 30 ಕಿ.ಮೀ. ದೂರದಲ್ಲಿರುವ ಭೇರು ಘಾಟ್ ಬಳಿ ಬಸ್ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿದ್ದವರು ಗುಜರಾತ್ ರಾಜ್ಯಕ್ಕೆ ಸೇರಿದವರು. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ ಈ ತಂಡ, ಉಜ್ಜೈನಿಗೆ ಭೇಟಿ ನೀಡಿ, ಓಂಕಾರೇಶ್ವರದತ್ತ ಹೊರಟಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ ಮಹಿಳೆಯರನ್ನು ಮೊದಲು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಇಂದೋರ್ನಲ್ಲಿರುವ ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಎಲ್ಲಾ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್ ತಿಳಿಸಿದ್ದಾರೆ.
ಘಾಟ್ನಲ್ಲಿ ಸಂಚರಿಸುವಾಗ ಚಾಲಕ ತೂಕಡಿಸಿದ್ದರಿಂದ ಬಸ್ ಪಲ್ಟಿಯಾಯಿತು ಎಂದು ಗಾಯಗೊಂಡವರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.